ಮಾಧ್ಯಮಗಳು ಮಾರಾಟಕ್ಕಿವೆ !
ರಿಯಾಲಿಟಿ ಶೋವಿನ Cruel Reality !
ರಾಮಾ-ಕೃಷ್ಣಾ ಅಂತ ಟಿವಿ ಮುಂದೆ ಕೈಮುಗಿದು ಕುಳಿತಿದ್ದ ಜಮಾನಾ ಚಾವಡಿಯಿಂದೆದ್ದು ಹೋಗಿ ವರ್ಷಾನುಗಟ್ಟಲೆ ಮನೆಯ ಹೆಂಗಸರು ದೇಶದ ತುಂಬೆಲ್ಲಾ ಅತ್ತೆ, ಸೊಸೆಯ ಸರಿ- ತಪ್ಪುಗಳನ್ನ ಮಾತಾಡಿಕೊಳ್ಳುತ್ತಾ, ಮೂಗೊರೆಸಿ ಅತ್ತುಕೊಂಡು ಕುಳಿತಿರುವಾಗಲೆ ಅದೆಲ್ಲೋ ಮೂಲೆಯಲ್ಲಿ ಮುಸಿಮುಸಿ ಅಳುತ್ತಿದ್ದ ಅಮಿತಾಬ್ ಬಚ್ಚನ್ ' ಲಾಕ್ ಕರ್ ದಿಯಾ ಜಾಯ್' ಅಂದಿದ್ದೇ ತಡ ಎಲ್ಲರೂ 'ಲಾಕ್' ಆಗಿದ್ದಂತೂ ಹೌದು ! ಹಾಗೆ ನೋಡಿದರೆ, 'ಕ್ಯೋಂ ಕಿ ಸಾಸ್ ಬಿ ಕಭೀ ಬಹೂ ಥೀ' ಅಂತ ಏಕ್ತಾ ಕಪೂರ್ನಂತವರು ಗಂಟೆಗೊಂದಾವರ್ತಿ ಕುಯ್ಯುವಾಗ ; ವನವಾಸ ೧೪ ವರ್ಷ, ಆದರೆ 'ರೀಲ್' ಬಿಡುವ ಸೀರಿಯಲ್ಗೆ ಅದರ ದುಪ್ಪಟ್ಟು ವರುಷ (ಹಾವಿನ ದ್ವೇಷ, ಹನ್ನೆರಡು ವರುಷ- ಎಲ್ಲಾ ಔಟ್ಡೇಟೆಡ್) ಅಂತೆಲ್ಲಾ ಮಾತಾಡಿಕೊಂಡಿರುವಾಗಲೇ ವಿ ಟಿವಿಯಲ್ಲಿ ಮೇಕಿಂಗ್ ಆಫ್ ದಿ ಬ್ಯಾಂಡ್ ಎಂಬ ರಿಯಾಲಿಟಿ ಷೋ ಮೆಲ್ಲನೆ ಪಡಸಾಲೆಗೆ ಬಂದು ಕುಳಿತಾಗಿತ್ತು. ಯಾವಾಗ ಟಿ ಆರ್ ಪಿ ಏರಿಸುವ ಸೂತ್ರಗಳ ಪೈಕಿ ಇದಕ್ಕೇ ಫಸ್ಟ್ ಪ್ರೈಜ್ ಅಂತ ಗೊತ್ತಾಯಿತೋ, ಪರಮಾತ್ಮ ಎಲ್ಲೆಲ್ಲೂ ಇದ್ದಾನೆ ಎನ್ನುವ ದಾಸ-ಸೂಫಿಗಳ ಮಾತಿನಂತೆ ಚಾನಲ್ ಚಾನಲ್ ಗೂ ರಿಯಾಲಿಟಿ ಶೋ ಸಂಸ್ಥೆಗಳು ಹುಟ್ಟಿಕೊಂದವು! ಬೇರೆ ದೇಶದವರ ಕಾಪಿ ಹೊಡೆದೂ ತೆಗೊಳ್ಳೋದು ಹೇಗೆ ಅನ್ನೋದಕ್ಕೂ ರಿಯಾಲಿಟಿ ಶೋ ಕಾನ್ಸೆಪ್ಟ್ ಮಾದರಿ ಆಯಿತು !
ಮೊದಲೆಲ್ಲಾ ರಿಯಾಲಿಟಿ ಷೋಗಳು ಪ್ರಾಮುಖ್ಯತೆ ಗಳಿಸಿಕೊಂಡಿದ್ದೇ ಸಮಾಜದ ವಾಸ್ತವಗಳನ್ನು ಕಿರುತೆರೆಯ ಮೇಲೆ ನಾಟಕೀಯವಾಗಿ ಅಥವಾ ಅಕರ್ಷಕವಾಗಿ ಪ್ರಸ್ತುತಪಡಿಸುವ ಮೂಲಕ ಜನತೆಗೆ ಸಂದೇಶವನ್ನು ತಲುಪಿಸುವುದಕ್ಕೆ ! ಅದರ ಪಾರದರ್ಶಕ ನಿಲುವಿನಿಂದಲೇ ಅದು ವ್ಯಾಪಕವಾದದ್ದು. ಹಾಗಾಗಿ ಕಥೆ ಆಧರಿತ ರಿಯಾಲಿಟಿ ಷೋಗಳ ಸಂಖ್ಯೆ ಜಾಸ್ತಿಯಿತ್ತು. ಅದೇ ಮಾದರಿಗೆ ಒಳಪಟ್ಟ ಗಾಯನ ನೃತ್ಯ ಕಾರ್ಯಕ್ರಮಗಳು ಸುಪ್ತ ಪ್ರತಿಭೆಗಳನ್ನು ಹೊರಸೂಸುವಲ್ಲಿ ಒಂದು ಪ್ರಯತ್ನ ಎಂದೂ ಭಾವಿಸಲಾಯಿತು. ಆದರೆ ಬರಬರುತ್ತಾ ರಾಯರ ಕುದುರೆ ಕತ್ತೆ ಎಂದು ಗೊತ್ತಾದದ್ದು ತೀರಾ ಇತ್ತೀಚೆಗೆ !
ರೆಹಮಾನ್ ಬರಲಿದ್ದಾರೆ ರಿಯಾಲಿಟಿ ಶೋನಲ್ಲಿ !ದೇಶದ ಸಂಗೀತ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಕಂಕಣ ತೊಟ್ಟಿರುವಂತೆ ಕಾಣುತ್ತದೆ ! ಡಿಸೆಂಬರ್ ಮೊದಲ ವಾರದಿಂದ ಎ.ಆರ್.ರೆಹಮಾನ್ ರ ರಿಯಾಲಿಟಿ ಷೋ ಪ್ರಸಾರವಾಗಲಿದೆ. ಅದೂ ದೂರದರ್ಶನದಲ್ಲಿ ! ಖಾಸಗಿ ದೂರದರ್ಶನ ಚಾನೆಲ್ ರಿಯಾಲಿಟಿ ಷೋಗಳ ಭರಟೆಯಲ್ಲಿ ಸರಕಾರಿ ದೂರದರ್ಶನದಲ್ಲಿ ಪ್ರಸಾರ ಮಾಡಲಿರುವ ರೆಹಮಾನ್ ರಿಯಾಲಿಟಿ ಷೋ ಪ್ರೇಕ್ಷಕರಲ್ಲಿ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟಿಸಿರುವುದಂತೂ ಸುಳ್ಳಲ್ಲ..ದೂರದರ್ಶನದಲ್ಲಿ ಎ.ಆರ್.ರೆಹಮಾನ್ ನಿರ್ವಹಿಸುವ 'The Big Band' ಷೋಗಾಗಿ ಈಗಾಗಲೇ ಏಳು ದೇಶಗಳ ಬಹಳಷ್ಟು ವಾದ್ಯವೃಂದಗಳು ಆಯ್ಕೆಯಾಗಿವೆ. ವಿಶೇಷವೆಂದರೆ ಭಾರತದ ಸಂಗೀತ ಪ್ರತಿಭೆಗಳನ್ನು ಮಾತ್ರ ಈ ರಿಯಾಲಿಟಿ ಷೋಗಾಗಿ ಹೆಕ್ಕಿತೆಗೆದಿಲ್ಲ. ಭಾರತ ಉಪಖಂಡಕ್ಕೆ ಸೇರಿದ ನೇಪಾಳ, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶ, ಸಿಂಗಪುರ ಮತ್ತ್ತು ಶ್ರೀಲಂಕಾದ ವಾದ್ಯವೃಂದಗಳು ಈಗಾಗಲೇ ಆಯ್ಕೆಯಾಗಿವೆ.ಈ ರಿಯಾಲಿಟಿ ಷೋವನ್ನು ಪ್ರಸಿದ್ಧ ಮನರಂಜನೆ ಮತ್ತು ಸಂವಹನ ಸಂಸ್ಥೆ ಫಾತ್ ಫಿಶ್ ನಿರ್ಮಿಸುತ್ತಿದೆ. ಸಾಧಾರಣವಾಗಿ ಸಂಗೀತ ಆಧಾರಿತ ರಿಯಾಲಿಟಿ ಷೋಗಳಲ್ಲಿ ಏಕಮಾತ್ರ ಸ್ಪರ್ಧಿಗಳದ್ದೇ ಕಾರುಬಾರು. ಆದರೆ ಬಿಗ್ ಬ್ಯಾಂಡ್ನದ್ದು ಉತ್ತಮ ವಾದ್ಯವೃಂದಗಳ ನಡುವಿನ ಸ್ಪರ್ಧೆ. ಕಾರ್ಯಕ್ರಮದಲ್ಲಿ ಸ್ಪರ್ದಿಸುವ ವಾದ್ಯವೃಂದಗಳು ೨ ರಿಂದ ೧೦ ಸದಸ್ಯರನ್ನು ಹೊಂದಿದ್ದು, ಕನಿಷ್ಠ ಓರ್ವ ಪ್ರಧಾನ ಗಾಯಕರಿರುತ್ತಾರೆ. ಗೆದ್ದ ತಂಡ ಫಾತ್ ಫೇರ್ ರೆಕಾರ್ಡಿಂಗ್ ಸಂಸ್ಥೆಯೊಂದಿಗೆ ಮೂರು ವರ್ಷಗಳ ಕಾಲ ರೆಕಾರ್ಡಿಂಗ್ ಗುತ್ತಿಗೆ ಪಡೆಯುತ್ತದೆ. ಇದರಲ್ಲಿ ಮೂರು ಆಲ್ಬಂ ಹಾಗೂ ಆರು ಸಂಗೀತ ವಿಡಿಯೋಗಳನ್ನು ನಿರ್ವಹಿಸುವ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸ, ಸಂಗೀತ ಕಚೇರಿಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ೧೦ ದಶಲಕ್ಷ ನಗದು ಬಹುಮಾನ ನೀಡಲಾಗುತ್ತದೆ. ಅಬ್ಬಾ, ನಾವೇ ವಾಸಿ ! ಭಾರತದಲ್ಲಿ 'ಕರೋಡ್ ಪತಿ' ಹಿಟ್ ಆಗಿದ್ದು ನೆನಪಿದೆಯಷ್ಟೇ ! ಈಗ 'ರೋಡ್ ಪತಿ' ಸರದಿ. 'ಬಿಗ್ ಬ್ರದರ್ಸ್' ನ ಜನಕ ಎಂಡಮಲ್ ಇದರ ಸೂತ್ರಧಾರ. ಸಂಬಳ ಕೊಡೋದಿಕ್ಕೆ ಕಾಸಿಲ್ಲ ಅಂತ ಕಂಪೆನಿಗಳ ಮಾಲೀಕರು ಒದ್ದಾಡುವಾಗ ಅಮೆರಿಕಾದ ಫಾಕ್ಸ್ ಟಿವಿ ರೆಸೆಷನ್ನನ್ನೇ ಆಧಾರ ಮಾಡಿಕೊಂಡು ರಂಜನೆ, ದುಡ್ಡು, ಜನರ ಸಮಯ ಎಲ್ಲವನ್ನೂ ಬಾಚಿಕೊಳ್ಳಲು ಹೊರಟಿದೆ. ಹೇಗಿದ್ದರೂ ಹಣದ ಮುಗ್ಗಟ್ಟಿನ ಸಮಯ, ನೋಡಿ. ಉದ್ಯೋಗ ಕಡಿತ ಸಾಮಾನ್ಯವಾಗಿ ಹೋಗಿದೆ. ಅದೇ ಕಡಿತವನ್ನ ಜನರೇ ಕೊಂಡಾಡುವಂತೆ ತೋರಿಸಿದರೆ ಹ್ಯಾಗೆ, ಎಂದು ಕಂಡಿದ್ದೇ ತಡ ; ಕಂಪನಿಯಲ್ಲಿರೋ ನೌಕರರೆಲ್ಲಾ ಟಿ ವಿ ಪರದೆಯ ಮೇಲೆ ! 'ಯಾರನ್ನ ಮನೆಗೆ ಕಳಿಸಬೇಕು ಅಂತ ಜನರೇ ಡಿಸೈಡ್ ಮಾಡಲಿ' ಅನ್ನೋದೇ ಷೋ ಹೈಲೈಟ್ ! ಒಂದರ್ಥದಲ್ಲಿ ಕೇರ್ ಆಫ್ ಫುಟ್ ಪಾತ್ ಮಾಡಲಿಕ್ಕೂ ಸ್ಪರ್ಧಾ ಕಾರ್ಯಕ್ರಮ. (ಒಂದುವೇಳೆ ತಾವೆಣಿಸಿದವರೇ ಮನೆಗೆ ಹೋದರೆ ವೀಕ್ಷಕರಿಗೂ ತಾವಂದುಕೊಂಡಂತೆ ಆಗಿದೆ ಎಂಬ ತೃಪ್ತಿ ಎಂಬುದೇ ಅಂದಾಜು!) ಹಾಗಾಗಿ ಮನೆಗೋಗೋವ್ರು ಯಾರು? ಕೆಲಸ ಕಳೆದುಕೊಳ್ಳೋವ್ರ್ಯಾರು ಅನ್ನೋದೂ ಒಂಥರಾ ಎಕ್ಸೈಟಿಂಗ್ ! ಬೆಕ್ಕಿಗೆ ಆಟ, ಇಲಿಗೆ ಪ್ರಾಣ ಸಂಕಟ ಅಂತ ಇದನ್ನೇ ಹೇಳೋದಾ !ಇಷ್ಟೇ ಅಲ್ಲ, 'ಚೀಟಿಂಗ್ ಸ್ಪೌಸಸ್ ಕಾಟ್ ಆನ್ ಟೇಪ್' ನಲ್ಲಿ ಗಂಡ ಹೆಂಡ್ತಿಯರು ಪರಸ್ಪರ ಹೇಗೆ ಮೋಸ ಮಾಡ್ತಾರೆ, ಬೇರೆಯವರ ಜೊತೆ ಯಾವ ಬೆಡ್ ರೂಂ ನಲ್ಲಿ ಇದ್ದರು ಎಂಬುದೊಂದು ರಿಯಾಲಿಟಿ ಷೋ ಅದರೆ, ಡೇಟಿಂಗ್ ಮಾಡುವವರ ಪೂರ್ವಾಪರಗಳನ್ನೆಲ್ಲಾ ರೆಕಾರ್ಡ್ ಮಾಡುವ 'ಬ್ಲೈಂಡ್ ಡೇಟ್' ಮತ್ತೊಂದು ಬಗೆಯದು ! ಇಬ್ಬರ ಜೊತೆ ಮಲಗಿದರೆ ಹೇಗಿರುತ್ತೆ ಅನ್ನುವುದರಿಂದ ಹಿಡಿದು 'ಬ್ಯಾಟಲ್ ಆಫ್ ದಿ ಬಾಡ್ಸ್' ನಲ್ಲಿ 'ಸೌಂದರ್ಯ' ದ ಮಾನದಂಡವೆಂಬಂತೆ ಹುಡುಗಿಯರು - ಹುಡುಗರಾದಿಯಾಗಿ ಎಲ್ಲಾ ಸ್ಪರ್ಧಿಗಳೂ ಬಟ್ಟೆ ಬಿಚ್ಚುವ ತನಕ ! ನೈಟ್ ಕ್ಲಬ್ನ ರಹಸ್ಯಗಳ ರಾಸಲೀಲೆಗೆ 'ನೈಟ್ ಕ್ಲಬ್ ಕನ್ಫೆಶನ್ಸ್' ಇದ್ದರೆ, 'ಶಾಕಿಂಗ್ ಬಿಹೇವಿಯರ್ ಕಾಟ್ ಆನ್ ಟೇಪ್', 'ಸೆಕ್ಸಿ ಕ್ಯಾಮ್' ರಿಯಾಲಿಟಿ ಷೋಗಳ ವಿವರಣೆ ಬೇಡವೇನೋ ! ಹೆಸರೇ ಎಲ್ಲಾ ತಿಳಿಸುತ್ತದೆಯಲ್ಲಾ! ಸದ್ಯದ ಮಟ್ಟಿಗೆ ನಾವೇ ವಾಸಿ ! ಆದರೂ ಕೆಲವೇ ದಿನಗಳಲ್ಲಿ ನಮ್ಮಲ್ಲಿಗೂ ಬಂದರೆ ಆಶ್ಚರ್ಯವೇನಿಲ್ಲ !ಮಾಧ್ಯಮಗಳು ನೀಡಬೇಕಾದದ್ದು ವಿನೋದವಲ್ಲ ; ವಿಕೃತ ಸಂತೋಷ ! : ವ್ಯಾಖ್ಯೆಗಳು ಬದಲಾಗುತ್ತಲಿದೆ. ********
'ಮದುವೆ ಅಂದ್ರೆ ಆಟ ಅಲ್ಲ' ಅಂತ ಗದರಿಸಿದವರ್ಯಾರು ಸ್ವಾಮೀ !
ಅಯ್ಯೋ ರಾಮಾ ! ಯಾರು ಇದಕ್ಕೆಲ್ಲಾ ಹೋಗ್ತಾರೆ ಅಂತೀರಾ?
ನಾವೇ !
ರಾಖಿ ಸಾವಂತ್ ಇಲೇಶ್ಗೆ ಉಂಗುರ ತೊಡಿಸಿಯಾಗಿದೆ ! ಅದಕ್ಕೂ ಮೊದಲೇ ಎನ್ಡಿಟಿವಿ ಇಮ್ಯಾಜಿನ್ ವಾಹಿನಿಗೆ ಕೇವಲ ೨೦ ದಿನದ ಅವಧಿಯಲ್ಲಿ ೧೮,೦೦೦ ಅರ್ಜಿ ಬಂದಿತ್ತು !
ಈ ಯಶಸ್ಸು (?) ನೋಡಿ ಅದಾಗಲೇ ರಾಹುಲ್ ಮಹಾಜನ್ಗೆ ಹುಡುಗಿಯರ ಕಾಲ್ ಬರಲಿಕ್ಕಾರಂಭವಾಗಿಯೂ ಆಯಿತು.
ಇನ್ನೇನು, ರಾಖಿ ಸ್ವಯಂವರದ ಫೈನಲಿಸ್ಟ್ಗಳಿಗೆ ಡಿಮ್ಯಾಂಡ್ನ ಕಾಲ !
ಮಾಲೆ ಹಿಡಿಯುವುದೊಂದು ಬಾಕಿ !
ಸರಿ ಬಿಡಿ, ಮದುವೆಯಾಗುವಷ್ಟೂ ಪುರುಸೊತ್ತಿಲ್ಲ. 'ಪತಿ ಪತ್ನಿ ಔರ್ ವೋ' ಶುರುವಾಗುವ ಹಂತದಲ್ಲಿದೆ. 'ಬೇಬಿ ಬಾರೋವರ್ಸ್' ಎಂಬ ಅಮೇರಿಕಾದ ತದ್ರೂಪು ಕೂಸು ಅದು ! ದಂಪತಿಗಳು ಮದುವೆ ನಂತರ ಎದುರಿಸುವ ಸವಾಲುಗಳ ಬಗ್ಗೆ ರಿಯಾಲಿಟಿ ಶೋ ! ಭಾಗವಹಿಸುವವರು ಯಾರು ಅಂತೀರಿ? ರಾಖಿ ಸಾವಂತ್ ಮತ್ತು ಇಲೇಶ್ !
'ಬಿಗ್ ಬ್ರದರ್ಸ್' ತಂಡದಲ್ಲಿ ಜನಾಂಗೀಯ ನಿಂದನೆ ಅಂತ ಊರೊಟ್ಟು ಮಾಡಿ ಭಾರತದಲ್ಲಿ ಗೂಡಿ ಖಳ ನಾಯಕಿ ಎಂದು ಮನೆಮಾತಾಗಿ, ಕೊನೆಗೆ ಆರಾಮವಾಗಿ ಸೆಲಬ್ರಿಟಿಗಳ ಸೆಲಬ್ರಿಟಿ ಅನ್ನಿಸಿಕೊಂಡವಳು ನಮ್ಮ ಊರಿನ ಶಿಲ್ಪಾ ಶೆಟ್ಟಿ. ಪಾಪ, ಮಾಧ್ಯಮಗಳು ಹುಯಿಲೆಬ್ಬಿಸಿಕೊಂಡದ್ದೇ ಬಂತು. ಮತ್ತೆ ನೋಡಿದರೆ ಪ್ರಕರಣ ಸುಖಾಂತ್ಯವಾಗಿ ತಣ್ಣಗೆ ಅವಳದ್ದೇ ಯೋಗ ಸಿ.ಡಿ., ಸೆಂಟು ! ಕೊನೆಗೆ ನಿಂದನೆ ಮಾಡಿದಳೆನ್ನಲಾದ ಜೇಡ್ ಗೂಡಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದೇ ತಡ, ಅವಳ ಸ್ಮರಣಾರ್ಥ ಹಪ್ಪಳ ಸೇರಿದಂತೆ ಇತರ ಕುರಕಲು ತಿಂಡಿಗಳು ಮತ್ತು ಊಟದೊಂದಿಗೆ ಬಳಸುವ ಕೆಲವು ಪದಾರ್ಥಗಳನ್ನು ಹೊಸ ಬ್ರ್ಯಾಂಡ್ನಡಿ ತರಲು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯೋಜಿಸಿಯೂ ಆಯಿತು ! ಆಹಾ ! ಎಂತ ಸ್ಮರಣೆ !
ಏನಾದರೂ ಆಗು ಮೊದಲು ಮಾನವನಾಗು : ಅಂದು..
ಹೇಗಾದರೂ ಸರಿ ! ಮೊದಲು ಫೇಮಸ್ ಆಗು : ಇಂದು...
ಸೆಲೆಬ್ರಿಟಿತ್ವ ಉಳಿಸಿಕೊಳ್ಳುವುದು : ಮುಂದುವರಿದ ಭಾಗ...
*****
ಭಾರತದ ಪ್ರಮುಖ ರಿಯಾಲಿಟಿ ಷೋಗಳುಇಂಡಿಯನ್ ಐಡಲ್ಜೋಡಿ ನಂ ೧ಝಲಕ್ ದಿಕ್ ಲಾಜಾತೋಲ್ ವೋಲ್ ಕೇ ಬೋಲ್ನಚ್ ಬಲ್ಲಿಯೇಇಂಡಿಯನ್ ಲಾಫ್ಟರ್ ಚಾಲೆಂಜ್ವಾಯ್ಸ್ ಆಫ್ ಇಂಡಿಯಾವಿಶ್ವದ ವಿವಾದಿತ ರಿಯಾಲಿಟಿ ಶೋಗಳುದೇರ್ ಇಸ್ ಸಂಥಿಂಗ್ ಅಬೌಟ್ ಮಿರಿಯಂ-೨೦೦೪- ಸುಂದರ ಯುವತಿಯನ್ನು ಓಲೈಸಬೇಕದದ್ದು ಸ್ಪರ್ಧೆ. ಆದರೆ ಕೊನೆಗೆ ಯುವತಿ ಓರ್ವ ಹಿಜಡಾ ಎಂದು ತಿಳಿದು ವಿವಾದವಾಗಿತ್ತು.ಸೀರಿಯಸ್ಲೀ ಡ್ಯೂಡ್ ಐಯಾಮ್ ಗೇ - ೨೦೦೪- ಅಮೇರಿಕಾಸ್ಪೇಸ್ ಕೆಡೆಟ್ಸ್- ೨೦೦೫- ಬ್ರಿಟನ್ದ ಫಾರ್ಮ್- ೨೦೦೪- ಬ್ರಿಟನ್ಬರ್ತ್ ನೈಟ್ ಅಲೈವ್- ೨೦೦೬- ಬ್ರಿಟನ್ದ ಬಿಗ್ ಡೋನರ್ ಶೋ- ೨೦೦೭- ನೆದರ್ಲ್ಯಾಂಡ್ಬಿಗ್ ಬ್ರದರ್ಸ್- ೨೦೦೭- ಬ್ರಿಟನ್ವಿಶ್ವದ ಪ್ರಖ್ಯಾತ ರಿಯಾಲಿಟಿ ಶೋಗಳುದ ಬಿಗ್ ಲೂಸರ್ಅಮೆರಿಕನ್ ಐಡಲ್ಎಕ್ಸ್ ಟ್ರೀಮ್ ಮೇಕೌಟ್ ಹೋಮ್ ಎಡಿಷನ್ಅಮೇರಿಕಸ್ ಟಫೆಸ್ಟ್ ಜಾಬ್ಡೀಲ್ ಓರ್ ನೋಡಿಲ್ಅಮೇರಿಕಸ್ ನೆಕ್ಸ್ಟ್ ಟಾಪ್ ಮಾಡೆಲ್ಲಾಸ್ಟ್ ಕಾಮಿಕ್ ಸ್ಟ್ಯಾಂಡಿಂಗ್ಕಿಚನ್ ನೈಟ್ ಮೇರ್ಹೆಲ್ಸ್ ಕಿಚನ್************
ಕಾಡಲ್ಲಿ ಕಳೆದುಹೋದರೆ ಹೇಗಿರುತ್ತದೆ ಅಂತ ಎಳೆಮಕ್ಕಳಿಗೂ ಗೊತ್ತಿರೋವಾಗ I am celebrity, get me out ಕಾಪಿ ಹೊಡೆದ ಕಾರ್ಯಕ್ರಮಕ್ಕೆ ಜೋತುಬಿದ್ದ ಇಮೇಜ್ ಟಿಆರ್ಪಿ ಇಲ್ಲದ ನಮ್ಮ ಬಾಲಿವುಡ್, ಸೀರಿಯಲ್ನ ಯುವಸಿಂಹಗಳು ತಾವಾಗೇ ಬಿದ್ದುಕೊಂಡು ಈಗ 'ಇಸ್ ಜಂಗಲ್ ಸೆ ಮುಜ್ಹೆ ಬಚಾವೋ ' ಅಂತಾ ಕೂಗುವುದಕ್ಕೆ ಶುರುಮಾಡಿದ್ದಾರೆ. ಹುಡುಗ-ಹುಡುಗಿಯರು ಒಟ್ಟಿಗೆ ಸ್ನಾನ ಮಾಡಬೇಕು, ಹುಳಹುಪ್ಪಟೆಗಳನ್ನು ಬಾಯಿಗೆ ಹಾಕಿಕೊಳ್ಳಬೇಕು, ವಿಷಜಂತುಗಳ ಜೊತೆ ಸರಸ ಮಾಡುವಷ್ಟು ಸಹನೆ ಇರಬೇಕು ಹೀಗೆ...! ಎಷ್ಟಾದರೂ ಭಾರತೀಯರು ಸಹನಶೀಲರಲ್ಲವೇ?
ಮತ್ತೊಂದೆಡೆ, ಸ್ಪರ್ಧಾರ್ಥಿಗಳನ್ನು ಬೀಚ್ಗೆ ಕಳುಹಿಸಿ ಅಲ್ಲಿನ ಜನರ ಒಳವಸ್ತ್ರಗಳನ್ನು ಶೇಖರಿಸಿ ತರುವ ಸ್ಪರ್ಧೆ- survivor ಎಂಟಿವಿಯಲ್ಲಿ 'ರೋಡೀಸ್' ಆದದ್ದು ಹೀಗೆ ! big brothers ಕಲರ್ಸ್ ಟಿವಿಯಲ್ಲಿ 'ಬಿಗ್ ಬಾಸ್' ಆದದ್ದೇ, ಕೆಲವೇ ದಿನಗಳಲ್ಲಿ ಮೊನಿಕಾ ಬೇಡಿ ಈಜುಡುಗೆ ಧರಿಸಿದ್ದು, ಮೊನಿಕಾ ಮತ್ತು ರಾಹುಲ್ ಮಹಾಜನ್ನ ವರ್ತನೆ ವ್ಯಾಪಕವಾಗಿ ಚರ್ಚೆಯಾಯಿತು. ಇದಲ್ಲದೆ ಅದೇ ಕಲರ್ಸ್ ಟಿವಿ 'ಬಾಲಿಕಾ ವಧು' ಎಂಬ ರಿಯಾಲಿಟಿ ಷೋ ಬಾಲ್ಯವಿವಾಹಕ್ಕೆ ಉತ್ತೇಜನ ನೀಡುವ ಮಾದರಿಯಲ್ಲಿ ರೂಪ ಪಡೆಯಿತು. 'ಪುರಾತನ ಸಂಸ್ಕೃತಿಯ ಪ್ರತಿಬಿಂಬವಂತೆ !' -ಇವರಿಗೆ ದೇಶದ ೨ ಪ್ರಮುಖ ಪಕ್ಷಗಳ ಸದಸ್ಯರೂ ಬೆಂಬಲ ಬೇರೆ ! ಸರ್ಕಾರವು ಈ ಕುರಿತು ಚರ್ಚೆಗೆ ಸಿದ್ಧವಿದೆ ಎಂದು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಪೃಥ್ವಿರಾಜ್ ಚೌವಾಣ್ ಪ್ರತಿಕ್ರಿಯಿಸಿದ್ದು, ಕೆಲವೇ ಗಂಟೆಗಳಲ್ಲಿ ನೋಟೀಸು ನೀಡಿದ್ದು ಮತ್ತೆ ನಡೆದ ಬೆಳವಣಿಗೆ.
ಬಹುಷಃ ಕ್ರೈಮ್ ಮಾಡೋದು ಹೇಗೆ ಎಂದು ಸ್ಪರ್ಧೆಯಿಡುವುದು ಬಾಕಿ !
ಟಿವಿ ಭಾರತಕ್ಕೆ ಕಾಲಿಟ್ಟ ಹೊಸತರಲ್ಲಿ ನೇತಾರರು ಹುಯ್ಯಲಿಟ್ಟಿದ್ದರು - 'ನಮ್ಮ ಸಂಸ್ಕೃತಿಯನ್ನ ಕೊಲ್ಲುತ್ತದೆ'. ಕಾಲಕ್ರ್ರಮೇಣ ಜನಸಾಮಾನ್ಯರಾದಿಯಾಗಿ ಅದರ ಎಲ್ಲಾ ಮಾಯಾಜಾಲಕ್ಕೆ ಒಗ್ಗಿಕೊಂಡರು. ಈಗ ನೋಡಿದರೆ ವ್ಯಾಪಕ ರೀತಿಯಲ್ಲಿ ಮನರಂಜನೆಯ ಹೆಸರಲ್ಲಿ ಮನಬಂದಂತೆ ಬದಲಾಯಿಸುವ ವಿಕೃತಿ ನಿಧಾನವಾಗಿ ಅವರಿಸುತ್ತಿದೆ.
*********
ಸಂಗೀತ ಸ್ಪರ್ಧೆಯೆಂದರೆ ಅದೊಂದು ಯುದ್ಧವೇ ಸರಿ ! ವೇದಿಕೆಯೇ ಸಮರಾಂಗಣ. ಹಾಡಿಗಿಂತಲೂ ಹಾಡುಗಾರರ ವಸ್ತ್ರಾಲಂಕಾರ, ಮನೆಯ ಆರ್ಥಿಕ ಸ್ಥಿತಿ, ಅವರ ವೈಯಕ್ತಿಕ ಜೀವನ, ಹೆತ್ತವರ ಆತಂಕ, ಹಾರೈಕೆ, ಸ್ಪರ್ಧಿಗಳ ತುಮುಲಗಳ ಬಗೆಗೆ, ಸಂಗೀತಕ್ಕೆ, ಬೆಳಕಿನ ಅಬ್ಬರಕ್ಕೆ ತಕ್ಕಂತೆ ಕುಣಿಯುವುದರ ಮೇಲೆ ಕ್ಯಾಮೆರಾ ಕಣ್ಣು ! ಈ ರಿಯಾಲಿಟಿ ಕಾರ್ಯಕ್ರಮಗಳು ನೇರವಾಗಿ ರಿಕಾರ್ಡಿಂಗ್ ಆಗಿರುತ್ತವೆ. ಅಂತೆಯೇ ನೇರ ಸಂಕಲನ ಆಗಿರಬೇಕು ಎಂಬುದು ಸಾಮಾನ್ಯ ತಿಳಿವಳಿಕೆ.
ಆದರೆ ಈ ಷೋಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಅಥವಾ ಅಭ್ಯರ್ಥಿಗಳು ಕ್ಯಾಮೆರಾಗಳ ಮುಂದೆ ನಿಂತಾಗ ಅವರ ವ್ಯಕ್ತಿತ್ವವನ್ನೇ ನಿರ್ವಹಿಸುವ ಸೂತ್ರಧಾರನಿರುತ್ತಾನೆ. ಅಷ್ಟೇ ಅಲ್ಲದೆ, ಸಂಕಲನ ಮಾಡುವ ಹಂತದಲ್ಲಿಯೂ ಅನೇಕ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಬದಲಾವಣೆಗಳು, ನೇತ್ಯಾತ್ಮಕವಾದರೂ, ಸಹಿಸಿಕೊಳ್ಳಬೇಕು. ಬೇರೆ ಉಪಾಯವಿಲ್ಲ; ಕಾರಣ, ಅಲ್ಪ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುವ ಅವಕಾಶ, ಅಪಾರ ಹಣ ಸಂಪಾದಿಸಬಹುದು, ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಳ್ಳಬಹುದು, ಅವಕಾಶವೂ ದಂಡಿಯಾಗಿ ಮನೆ ಬಾಗಿಲಿಗೆ ಬಂದು ಬೀಳಬಹುದು ! ಹಾಗಾಗಿ, ತೀರ್ಪುಗಾರ-ಸ್ಪರ್ಧಿಗಳ ವಾಗ್ವಿವಾದ, ಪರದೆಯ ಹಿಂದಿನ ಅರಚಾಟ, ಭಾವೋತ್ಕರ್ಷಗಳೆಡೆಗೂ, ಆಕಳಿಸಿ ತೂಕಡಿಸುವವರೆಗೂ ಒಂದು ಕಣ್ಣು ಇದ್ದೇ ಇರುತ್ತದೆ. ಇದರೊಂದಿಗೆ ತೀರ್ಪುಗಾರರ ಪಕ್ಷಪಾತ ಧೋರಣೆ ಮತ್ತು ವೈಯ್ಯಕ್ತಿಕ ಇಷ್ಟಾನಿಷ್ಟಗಳೂ ಸೇರಿದರಂತೂ ಪ್ರತಿಭಾವಂತರು ಮತ್ತಷ್ಟು ಮಂಕಾಗಬೇಕಾಗುತ್ತದೆ.
ಆಶಾಭಾವನೆಯೇ ಕೊನೆಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತೆ ಮಾಡುತ್ತಿದೆ ಎಂಬುದಕ್ಕೆ ರಿಯಾಲಿಟಿ ಶೋ ಒಳ್ಳೆಯ ಉದಾಹರಣೆ. ಒಂದು ಸುತ್ತಿನಲ್ಲಿ ಸೋತ ಸ್ಪರ್ಧಿಗಳನ್ನು ಎಲಿಮಿನೇಷನ್ ರೌಂಡ್ ಮೂಲಕ ಉಚ್ಚಾಟಿಸುವ ಪ್ರಕ್ರಿಯೆ ನಾಟಕೀಯ ಮಾತ್ರವಲ್ಲ ಒಂದು ಬಗೆಯಲ್ಲಿ ಶೊಷಣೆಯೇ ಹೌದು. ಭಾವನೆಗಳನ್ನು ಬಿಕರಿ ಮಾಡುವುದು ಎಂದರೆ ಹೀಗೆಯೇ ! ಪೋಷಕರು ಅಳುವುದು, ತೀರ್ಪುಗಾರರು ಸಂತೈಸುವುದು, ಅಪ್ಪಿ ಮುದ್ದಾಡುವುದು, ಅವರೊಂದಿಗೆ ತಾವೂ ಅಳುವುದು..ಹೀಗೆ, ಸೋಲಿನ ಭಾವನೆಗಳನ್ನು ವೈಭವೀಕರಿಸಿ, ನೋಡುಗರನ್ನು ರಂಜಿಸುವ ಮೂಲಕ, ಗೆಲುವನ್ನು ಅತಿರಂಜಿತವನ್ನಾಗಿಸುವುದಕ್ಕೆ ಏನೆಲ್ಲಾ ಕ್ರೌರ್ಯ ಮಾಡಬೇಕೋ ಅಷ್ಟೂ ಸಿದ್ಧ.. ಅನೇಕ ಬಾರಿ ಸ್ಪರ್ಧಿಗಳು ವೇದಿಕೆಯ ಮೇಲೆ ತಲೆ ಸುತ್ತಿ ಬಿದ್ದಿರುವ, ಮಾನಸಿಕವಾಗಿ ನೊಂದು ಹೋದ, ವೈಕಲ್ಯಕ್ಕೆ ತುತ್ತಾದ ಪ್ರಕರಣಗಳೂ ನಡೆದಿವೆ. ಮಕ್ಕಳ ಬಾಲ್ಯವನ್ನೇ ಬೇಟೆಯಾಡುವ ಇಂತಹ ವಿಕೃತಿಗಳು ಮಕ್ಕಳ ಭವಿಷ್ಯವನ್ನೇ ಬಲಿ ತೆಗೆದುಕೊಂಡಿವೆ ! ಉತ್ತರ ಭಾರತದ ರಿಯಾಲಿಟಿ ಷೋವಿಗೆ ಶಿಂಜಿನಿ ಎನ್ನುವ ಬಾಲಕಿಯ ಇಡೀ ಜೀವನವೇ ಬಲಿಯಾದದ್ದು ಹೀಗೆಯೇ !
ಇನ್ನೂ ಇದೆ ತಂತ್ರ ! : ಹೊಸ ಚಲನಚಿತ್ರ ಬಿಡುಗಡೆಗೆ ಬಂದಿದ್ದಲ್ಲಿ ಆ ಚಿತ್ರದ ನಟ/ನಟಿ/ನಿರ್ದೇಶಕ ಮಹಾಶಯರು ಅತಿಥಿ ಗಣ್ಯರಾಗಿ ಆಗಮನ ( ಸಂಗೀತದ ತಲೆಬುಡ ಗೊತ್ತಿಲ್ಲದಿದ್ದರೂ !) ಅಥವಾ ಈಗಾಗಲೇ ಇಮೇಜ್ ಕಡಿಮೆಯಿರುವ ಮುಖದರ್ಶನ ! ಒಟ್ಟಿನಲ್ಲಿ ಚಿತ್ರತಾರೆಯರಿಗೆ, ಚಿತ್ರಗಳಿಗೂ ರಿಯಾಲಿಟಿ ಶೋ ಗಳೊಂದು ಜಾಹೀರಾತು ತಂತ್ರಗಳಲ್ಲದೆ ಬೇರೇನಿಲ್ಲ ! ಕೊನೆಗೆ ಶ್ರೋತೃಗಳ ವೋಟುಗಳು ಬಹಳ ಮುಖ್ಯ ಎನ್ನುತ್ತಾ ಎಸ್ಎಂಎಸ್ಗಳಲ್ಲಿ ಅಂಗಾಲಾಚಿ ಭಿಕ್ಷೆ ಬೇಡುವುದು ಕುಡಾ ದುಡ್ಡು ಮಾಡುವ ಉಪಾಯಗಳಲ್ಲಿ ಬಹಳ ಮುಖ್ಯವಾದದ್ದು ! ಆದರೆ ಇದು ಉಂಟು ಮಾಡುವ ವರ್ಗ ತಾರತಮ್ಯ, ಜಾತಿ-ಮತದ ಅಧಾರದಲ್ಲಿ ವೋಟುಗಳ ಮಾರಾಟ ಮುಂದೊಂದು ದಿನಕ್ಕೆ ಬಹಳ ದೊಡ್ಡ ಕಂದರವನ್ನೇ ಸೃಜಿಸಿದರೂ ಆಶ್ಚರ್ಯವಿಲ್ಲ.
**********
ಕನ್ನಡವೇನೂ ಕಡಿಮೆಯಿಲ್ಲ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮುಂದಾಳತ್ವದ ಈ ಟಿ ವಿಯ 'ಎದೆ ತುಂಬಿ ಹಾಡುವೆನು' ಭಿನ್ನ ಭಿನ್ನ ರೀತಿಯಿಂದ ಚೆಂದಗೆ ಯಶಸ್ವಿಯಾಗುವಷ್ಟರಲ್ಲಿಯೇ ಚಾನಲ್ ಪ್ರಪಂಚಕ್ಕೆ ಧುಮುಕಿದ ಎಲ್ಲಾ ರಿಯಾಲಿಟಿ ಮಹಾಶಯರು ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಅಜ್ಜಂದಿರ ವರೆಗೂ ಹಾಡಿಸುವುದಕ್ಕೆ, ಶುರು ಮಾಡಿ ವರುಷಗಳೇ ಕಳೆದಿವೆ. ಸಂಗೀತ ಕ್ಷೇತ್ರಕ್ಕೆ ಎಂತಹ ಪ್ರೋತ್ಸಾಹ ನೋಡಿ ! ಪರಿಣಾಮ, ಎಷ್ಟು ದಿನದಲ್ಲಿ ನನ್ನ ಮಗ/ಮಗಳು ಸಂಗೀತ ಕಲಿತು ಟಿ.ವಿ.ಯಲ್ಲಿ ಹಾಡಬಹುದು?" - ನೃತ್ಯ, ಸಂಗೀತ ತರಬೇತುದಾರರಿಗೆ ಒಂದು-ಎರಡು ಹಾಡಿಗೆ ಪ್ರಸಿದ್ಧಿ ಮಾಡಿಸಿ ಪ್ರೈಜ್ ಗಿಟ್ಟಿಸಿಕೊಳ್ಳಬೇಕೆಂಬ ಒತ್ತಾಸೆಗೆ ಕುರಿಗಳಾದವರು !
ಸರಿ, ಸೋತಿದ್ದಕ್ಕೆ ಸಹಜವಾಗಿ ಅಳು ಬಂದು ಮತ್ತೆ ಸಮಾಧಾನವಾದರೂ, ಅದನ್ನೆ ತಿರುಗಿಸಿ ಮುರುಗಿಸಿ ಮತ್ತೆ ಮತ್ತೆ ಅಳಿಸಿ, ವಿಷಾದಗೀತೆಯ ಪಿಟೀಲಿಗೆ ಏನನ್ನೋಣ !
ಒಂದಷ್ಟು ಜನರನ್ನು ಕುಣಿಸಿ ತಾವೂ ಕುಣಿದು ಕೊರತೆ ಕಂಡುಹಿಡಿಯುವುದು ಒಂದಾದರೆ, ಜನರನ್ನ 'ಕುರಿಗಳು ಸಾರ್ ಕುರಿಗಳು' ಅಂತ ಕುರಿ ಮಾಡಿ, ತಾವೂ ಕೋತಿಗಳಂತೆ ಆಡಿದ್ದೇ ತಡ, ಉಳಿದೆಲ್ಲಾ ಚಾನಲ್ಗಳದ್ದೂ (ಅದೇ ರೀತಿಯ ಹೆಸರಷ್ಟೇ ಬೇರೆ ಕಾಣುವ) ಟೋಪಿ ಇಡುವ ಕಾಯಕ ಕೈಲಾಸ ಸ್ವಲ್ಪ ಹಳತು ! ಸ್ವಾರಸ್ಯವೆಂದರೆ, ಈಗಿನ ಸರಿಗಮಪ ಹಾಡುವ ಕಾರ್ಯಕ್ರಮದ ಶೀರ್ಷಿಕೆಯಲ್ಲಿ ಇರುವ ಪದಗಳಲ್ಲಿ 'ಸರಿಗಮಪ'ದ ಐದು ಅಕ್ಷರ ಮಾತ್ರ ಕನ್ನಡ ! ಅದು ಇಂದಿನ ಟ್ರೆಂಡ್ ! ಸೀರೆಗೂ ಸವಾಲ್ ಹಾಕೋದು ಒಂದಾದರೆ, ಝಣಝಣ ಕಾಂಚಾಣ ಉದುರಿಸುವುದು ಮತ್ತೊಂದು ! ಫ್ರಿಡ್ಜ್-ವಾಶಿಂಗ್ ಮೆಷಿನ್ ಕೊಡೋದು ಒಂದಾದರೆ, ಟೂರ್ಗೆ ಕರ್ಕೊಂಡು ಹೋಗೋದು ಮತ್ತೊಂದು ! ಅಷ್ಟೇಕೆ ಅಡುಗೆಯಲ್ಲೂ ಯಾರು ಬೆಸ್ಟ್ ಅತ್ತೆ ಸೊಸೆ ಎಂದು ಕಂಡು ಹಿಡಿವ ಕೈ ಚಳಕ ! ಎಲ್ಲರ ಡ್ಯಾಡಿಗಳಿಗಿಂತ ಯಾರ ಡ್ಯಾಡಿ ಬೆಸ್ಟ್ ಅನ್ನೋದಕ್ಕೆ 'ಡ್ಯಾಡಿ ನಂಬರ್ ಒನ್' !
*************
Moment of truth ನ ನಕಲು ಸ್ಟಾರ್ ಟೀವಿಯ 'ಸಚ್ ಕೆ ಸಾಮ್ನಾ' ಸತ್ಯದ ಅಗ್ನಿಪರೀಕ್ಷೆ ನಡೆಸುವುದರಲ್ಲಿ ಬಹುಷ ನಮ್ಮ ಮಂಪರು ಪರೀಕ್ಷೆ ತಜ್ಞರಿಗೇ ಸವಾಲು ಹಾಕಿ ಕೋರ್ಟ್ಗಳ ವಾದ ಪರಿಶೀಲನೆ- ಜಡ್ಜ್ ಮೆಂಟ್ಗೇ ಸಡ್ಡು ಹೊಡೆಯ ಹೊರಟಿದೆ.
ಇದರಲ್ಲಿ ಭಾಗವಹಿಸಿದವರಿಗೆ ತಮ್ಮ ವೈಯಕ್ತಿಕ ಮತ್ತು ವೃತ್ತಿ ಬದುಕಿಗೆ ಸಂಬಂಧಿಸಿದಂತೆ ೨೧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇವರು ನೀಡುವ ಉತ್ತರಗಳನ್ನು ಪಾಲಿಗ್ರಾಫ್ ಪರೀಕ್ಷೆಯ ಉತ್ತರಕ್ಕೆ ಹೋಲಿಸಲಾಗುತ್ತದೆ. ಕಾರ್ಯಕ್ರಮದ ರೆಕಾರ್ಡಿಂಗ್ಗೆ ಮುಂಚಿತವಾಗಿ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಸತ್ಯ ಉತ್ತರ ನೀಡಿದಲ್ಲಿ ಅವರು ಒಂದು ಕೋಟಿ ರೂಪಾಯಿ ಬಹುಮಾನ ಗೆಲ್ಲುತ್ತಾರೆ.
ಟಿವಿ ತಾರೆ ರಾಜೀವ್ ಖಾಂಡೇವಾಲ್ ನಡೆಸಿಕೊಡುವ ಈ ಕಾರ್ಯಕ್ರಮ ಪ್ರದರ್ಶನಗೊಂಡ ಪ್ರಥಮ ವಾರದಲ್ಲೇ ತನ್ನ ಟಿಆರ್ಪಿ ರೇಟನ್ನು ಹೆಚ್ಚಿಸಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕವೇ ಕ್ರಿಕೆಟಿಗ ವಿನೋದ್ ಕಾಂಬ್ಳಿ ತನ್ನ ಸ್ನೇಹಿತ ಸಚಿನ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ವಿವಾದ ಹುಟ್ಟಿಕೊಂಡಿತ್ತು. ಆದರೆ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ , 'ತೆಂಡೂಲ್ಕರ್ ವಿರುದ್ಧ ನಾನು ಯಾವುದೇ ರೀತಿಯ ಹೇಳಿಕೆ ನೀಡಿಲ್ಲ. ಸಚಿನ್ ಕುಟುಂಬ ನನಗೆ ಬಾಲ್ಯದಿಂದಲೂ ಆಶ್ರಯ ನೀಡಿದೆ. ಅವರ ವಿರುದ್ಧ ನಾನು ಆರೋಪ ಮಾಡಿಲ್ಲ.ಆರೋಪಗಳು ಆಧಾರರಹಿತ' ಎಂದು ತಳ್ಳಿಹಾಕಿದ್ದರು.
ಆದರೆ, ಟೈಮ್ಸ್ ನ್ಯೂಸ್ ಚಾನೆಲ್ 'ಸಚಿನ್ ತಮಗೆ ಕಷ್ಟದ ಕಾಲದಲ್ಲಿ ಸಹಾಯ ಮಾಡಲಿಲ್ಲ' ಎನ್ನುವ ಕಾಂಬ್ಳಿಯವರ ಹೇಳಿಕೆಗಳ ವೀಡಿಯೋ ತುಣುಕುಗಳನ್ನು, ಪುನಃ ಬಿತ್ತರಿಸಿ ಮಾಡಿದ್ದು ಸಾಕ್ಷಿ ಹೇಳುವ ಕೆಲಸ !
ನೀವು ಗಂಡನ ಜೊತೆ ಮಲಗಿರುವಾಗ ಬೇರೆಯವರನ್ನ ನೆನಪಿಸಿಕೊಳ್ಳುತ್ತೀರಾ? ಅನ್ನೋ ಪ್ರಶ್ನೆ ಕುಟುಂಬ ಸಮೇತರಾಗಿ ಕೂತು ನೋಡುವ ನಮ್ಮ ಟಿ ವಿ ಪರದೆ ಮೇಲೆ ಬರುತ್ತೆ ಅಂತ ಯಾರೂ ಕಲ್ಪಿಸಿಕೊಂಡಿರಲೂ ಸಾಧ್ಯವಿಲ್ಲ.ಆದರೆ ಇವತ್ತು ಸಚ್ ಕಾ ಸಾಮ್ನಾ ನೀವು ಯಾವತ್ತಾದರೂ ವೇಶ್ಯೆಯ ಸಂಪರ್ಕ ಮಾಡಿದ್ದೀರಾ? ಮದುವೆ ಮಾಡಿಕೊಳ್ಳದೆ ಮಕ್ಕಳಾಗಿದೆಯಾ? ನಿಮ್ಮ ಗಂಡನಿಗೆ ಗೊತ್ತಾಗುವುದಿಲ್ಲ ಎನ್ನುವುದಾದರೆ ನೀವು ಇನ್ನೊಬ್ಬರ ಸಹವಾಸ ಮಾಡಲು ಸಿದ್ಧರಿದ್ದೀರಾ? ಅನ್ನೋ ಪ್ರಶ್ನೆ ಕೇಳುತ್ತಾ ಲೈ ಡಿಟೆಕ್ಟರ್ ಸುಳ್ಳಿನ ಪತ್ತೆಗೆ ಸಜ್ಜಾಗಿ ನಿಂತಿದೆ !
ಮಹಿಳೆಯೊಬ್ಬಳಿಗೆ ಆಕೆಯ ಪತಿಯ ಉಪಸ್ಥಿತಿಯಲ್ಲೇ, ನಿಮಗೆ ವಿವಾಹೇತರ ಸಂಬಂಧಗಳು ಇವೆಯೇ ಎಂದು ಪ್ರಶ್ನಿಸಲಾಗಿತ್ತು. ಪತಿಗೆ ತಿಳಿಯದೇ ಇದ್ದಲ್ಲಿ ಇನ್ನೊಬ್ಬರೊಂದಿಗೆ ಮಲಗುವಿರಾ ಎಂಬ ಪ್ರಶ್ನೆಗೆ ಆಕೆ ಇಲ್ಲ ಎಂದು ಹೇಳಿದಳು. ಆದರೆ, ಪಾಲಿಗ್ರಾಫ್ ಯಂತ್ರ ಆಕೆಯ ಉತ್ತರ ಸುಳ್ಳು ಎಂದು ತೀರ್ಪು ನೀಡಿತು. ಹಾಗಾದರೆ ಕಿರುತೆರೆಯ ಮೇಲೆ ತಮ್ಮ ಕೌಟುಂಬಿಕ, ವೈಯ್ಯಕ್ತಿಕ ಸಮಸ್ಯೆಗಳನ್ನು ಹೇಳಿಕೊಂಡು ಕಣ್ಣೀರು ಸುರಿಸುವುದು ನೋಡುಗರಿಗೆ ಒಂದು ರೀತಿಯ ವಿಚಿತ್ರ ಆನಂದವೇ !
ಸಂಸಾರದ ಗುಟ್ಟು ವ್ಯಾಧಿ ರಟ್ಟು !
"ಮನೆಮುರುಕ' ಸಚ್ ಕಾ ಸಾಮ್ನಾ ಶೋ ತನ್ನ ಮೊದಲ "ಬಲಿ' ತೆಗೆದುಕೊಂಡಿದೆ ! ಯುವಕನೊಬ್ಬ ಪತ್ನಿಯ ಮೇಲೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆಗಸ್ಟ್ ೧೧ರ ಎಪಿಸೋಡನ್ನು ವೀಕ್ಷಿಸಿ ಅದರಿಂದ ಪ್ರಭಾವಿತನಾದ ದೆಹಲಿ ಸಮೀಪದ ಗ್ರೇಟರ್ ನೋಯ್ಡಾದ ಶಾಪಿಂಗ್ ಮಾಲ್ ಒಂದರಲ್ಲಿ ಭದ್ರತಾ ಸಲಹೆಗಾರನಾಗಿ ಕೆಲಸ ಮಾಡುತಿದ್ದ ಸುರೀಂದರ್ ತನ್ನ ಪತ್ನಿಗೂ ಅದೇ ಮಾದರಿಯ ಪ್ರಶ್ನೆಗಳನ್ನು ಕೇಳಿದ. ಆಗ "ಬೇರೊಬ್ಬನ ಜತೆ ನಾನು ವಿವಾಹಪೂರ್ವ ಲೈಂಗಿಕ ಸಂಬಂಧ ಹೊಂದಿದ್ದೆ' ಎಂದು ಪತ್ನಿ ನೀಡಿದ ಉತ್ತರದಿಂದ ಆತ ನೊಂದು ಆತ ಆತ್ಮಹತ್ಯೆ ಮಾಡಿಕೊಂಡ.
ಸಚ್ ಕಾ ಸಾಮ್ನಾ ಕಾರ್ಯಕ್ರಮವು ೧೯೯೫ರ ಕೇಬಲ್ ಟಿವಿ ನೆಟ್ವರ್ಕ್ ಕಾಯ್ದೆಯ ಕಾರ್ಯಕ್ರಮ ಸಂಹಿತೆಯ ವಿಧಿಗಳಾದ ೬(೧) ಎ, ಡಿ, ಐ ಮತ್ತು ಒ ವನ್ನು ಉಲ್ಲಂಘಿಸುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ಹಿನ್ನೆಲೆಯಲ್ಲಿ ಶೋಕಾಸ್ ನೋಟೀಸು ನೀಡಲಾಗಿದೆ. ಈ ಕಾರ್ಯಕ್ರಮವು ಭಾರತೀಯ ಸಮಾಜದ ಮೌಲ್ಯಗಳಿಗೆ ವಿರುದ್ಧವಾದುದಾಗಿದೆ ಎಂಬುದಾಗಿ ದೀಪಕ್ ಮಿಯಾನಿ ಮತ್ತು ಪ್ರಭಾತ್ ಕುಮಾರ್ ಎಂಬಿಬ್ಬರು ಅರ್ಜಿದಾರರು ದೂರಿದ್ದು, ಈ ಕಾರ್ಯಕ್ರಮದ ಪ್ರಸಾರದ ರದ್ದತಿಗೆ ಮನವಿ ಮಾಡಿದ್ದರು ಕೂಡಾ !
ಆದರೆ ನ್ಯಾಯಮೂರ್ತಿಗಳಾದ ಎ.ಪಿ. ಶಾ ಮತ್ತು ಮನಮೋಹನ್ ಅವರುಗಳನ್ನು ಒಳಗೊಂಡಿದ್ದ ವಿಭಾಗೀಯ ಪೀಠವು ರಾಷ್ಟ್ರದ ಸಂಸ್ಕೃತಿಯು ಟಿವಿ ಕಾರ್ಯಕ್ರಮದಿಂದ ಒಡೆಯುವಷ್ಟು ದುರ್ಬಲವಲ್ಲ ಎಂದು ಹೇಳಿದೆ. "ಈ ಕಾರ್ಯಕ್ರಮವನ್ನು ನಿಷೇಧಿಸಬೇಕೇ ಬೇಡವೇ ಎಂಬುದು ಸರ್ಕಾರಕ್ಕೆ ಬಿಟ್ಟ ವಿಚಾರ. ಇದು ನ್ಯಾಯಾಲಯದ ಕೆಲಸವಲ್ಲ. ಇದಕ್ಕಿಂತಲೂ ಗಂಭೀರವಾದ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು ಅದನ್ನು ಮೊದಲು ಪರಿಹರಿಸಬೇಕಿದೆ" ಎಂಬುದು ವಿಭಾಗೀಯ ಪೀಠದ ತೀರ್ಪು !
ಕಾರ್ಯಕ್ರಮವನ್ನು ನೋಡಲಾಗದಿದ್ದರೆ ಟಿವಿ ಬಂದ್ ಮಾಡಿ ಎಂಬುದಾಗಿ ದೆಹಲಿ ಹೈಕೋರ್ಟ್ ವೀಕ್ಷಕರಿಗೆ ಸಲಹೆ ಮಾಡಿದೆ. ನೈತಿಕತೆಯನ್ನು ಕಾಪಾಡುವುದು ತನ್ನ ಪಾತ್ರವಲ್ಲ ಎಂದು ಹೇಳಿದ ನ್ಯಾಯಾಲಯ, ಈ ಕಾರ್ಯಕ್ರಮದಿಂದ ನೋವನುಭವಿಸುವವರು ಅದರ ಪ್ರಸಾರದ ವೇಳೆಗೆ ಟಿವಿ ಬಂದ್ ಮಾಡಿ ಎಂದು ಹೇಳಿದೆ. ಜೊತೆಗೆ ಈ ಕುರಿತು ಅರ್ಜಿದಾರರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬಹುದು ಎಂದಿದೆ.
ವಿವಾದಾತ್ಮಕ ಟಿವಿ ರಿಯಾಲಿಟಿ ಶೋ 'ಸಚ್ ಕಾ ಸಾಮ್ನಾ' ನಿರ್ಮಾಣ ಕಂಪನಿಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟೀಸ್ ನೀಡಲು ನಿರ್ಧರಿಸಿದೆ. ಕಾರ್ಯಕ್ರಮದ ವಿರುದ್ಧ ಆಯೋಗಕ್ಕೆ ಹಲವು ಮಹಿಳೆಯರು ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ಕೋರಿ ರಿಯಾಲಿಟಿಶೋ ನಿರ್ಮಾಣ ಸಂಸ್ಥೆ ಬಿಗ್ ಸಿನರ್ಜಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ತಿಳಿಸಿದ್ದರು.
ಸಾಮಾಜಿಕ, ವೈಯಕ್ತಿಕ ಮತ್ತು ವ್ಯಕ್ತಿಗತ ಬದುಕಿನ ವ್ಯತ್ಯಾಸ ತಿಳಿಯಬಾರದು, ಬದಲಾಗಿ ಅವುಗಳಲ್ಲೆಲ್ಲಾ ಕ್ಯಾಮೆರಾ ಹಿಡಿದು ಕೈಯ್ಯಾಡಿಸಬೇಕು : ಮಾಧ್ಯಮಗಳ ಹೊಸ ನೀತಿ ಸಂಹಿತೆಯೇ ? !
*************
ಇಂದು ಟಿವಿ ಎಂದರೆ ಸಾವಿರಾರು ಕೋಟಿ ರುಪಾಯಿಗಳ ವಹಿವಾಟು. ಅದರಲ್ಲೂ ಪ್ರೈಮ್ ಟೈಂ (೭ರಿಂದ ೧೦ಗಂಟೆ) ವರೆಗಿನ ಸಮಯ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ಜೊತೆಗೆ ದುಡ್ಡು ಮಾಡುವ ಸಮಯ. ಹಾಗೆ ನೋಡಿದಲ್ಲಿ ರಿಯಾಲಿಟಿ ಷೋ, ಜಾಹಿರಾತುಗಳಿಂದ ಬರುವ ಲಾಭವೇ ೬೦೦೦ ಕೋಟಿ ರುಪಾಯಿಗಳನ್ನು ಮೀರಿದೆ. ಲೆಕ್ಕಮಾಡಲು ಹೊರಟರೆ ಭಾರತದಲ್ಲಿ ಸುಮಾರು ೫೦೦ಕ್ಕಿಂತಲೂ ಹೆಚ್ಚಿನ ರಿಯಾಲಿಟಿ ಶೋಗಳಿವೆ. ಮಾತ್ರವಲ್ಲ, ಈಗಾಗಲೇ ಸರ್ಕಾರ ೪೧೦ ಹೊಸ ಚಾನಲ್ಗಳಿಗೆ ಒಪ್ಪಿಗೆ ಕೊಟ್ಟಿದೆ. ೭೩ ಹೊಸ ವಿದೇಶಿ ಚಾನಲ್ಗಳ ಪ್ರಸಾರಕ್ಕೂ ಗ್ರೀನ್ ಸಿಗ್ನಲ್ ತೋರಿಸಿಯಾಗಿದೆ. ಈಗ ಠಸ್ಸೆ ಒತ್ತುವ ಸರದಿಗೆ ಕಾದು ನಿಂತಿರುವುದು ೧೪೩ ಭಾರತೀಯ ಮತ್ತು ೨೦ ವಿದೇಶೀ ಚಾನಲ್ ! ಹಾಗಾದರೆ ಅಂದಾಜು ಮಾಡೋಣ. ಇವುಗಳಲ್ಲಿ ಇನ್ನೆಷ್ಟು ಚಾನಲ್ ಗಳಲ್ಲಿ ರಿಯಾಲಿಟಿಗಳ ಹಸಿಬಿಸಿಗಳಿರಬಹುದು ! ?
ಹೀಗೆಂದು ಬರುವ ಎಲ್ಲರೂ ಇದೇ ರೀತಿಯೇ? ಅಲ್ಲ. ಮರಳುಗಾಡಿನ ಮಧ್ಯೆ ಅಲ್ಲಲ್ಲಿ ಓಯೆಸಿಸ್ಗಳಿವೆ. ಬಲು ಸೊಗಸಾಗಿ ಹಾಡುವ, ನರ್ತಿಸುವ, ಕಲೆಯನ್ನೇ ಜೀವನ ಎಂದುಕೊಂಡ ಪ್ರತಿಭಾವಂತರೂ ಇದ್ದಾರೆ. ಅಂತೆಯೆ ರಿಯಾಲಿಟಿ ಷೋಗಳ ಇತ್ಯಾತ್ಮಕ ಮುಖಗಳೂ ಕಣ್ಣೆದುರಿಗಿದೆ.
ಒಮ್ಮೆ ನಮ್ಮ ಪಕ್ಕದ ಮಲಯಾಳಂ ಚಾನಲ್ಗಳನ್ನ ನೋಡೋಣ ! ಏಷ್ಯಾನೆಟ್ ನಲ್ಲಿ 'ಸಿಟಿಜನ್ ಜರ್ನಲಿಸ್ಟ್' ಅಂತ ರಿಯಾಲಿಟಿ ಷೋ ಇದೆ. ಇನ್ನೊಂದೆಡೆ ಮಮ್ಮುಟ್ಟಿ ಪ್ರತಿಭೆ ಹೊರಗೆಳೆದು ತರುತ್ತಿದ್ದಾರೆ. ಕ್ಯಾಮೆರಾ ಮೈಕ್ ಹಿಡಿದು ಬೀದಿ ಬೀದಿಗೆ ಹೋಗುವ ಮಂದಿ ಕಷ್ಟದ ಕಥೆ, ಸಂತೋಷದ ಸುದ್ದಿಗಳೆರಡನ್ನೂ ವೀಕ್ಷಕರಿಗೆ ದಯಪಾಲಿಸುತ್ತಾರೆ. ಅಮೃತಾಟಿವಿಯಲ್ಲಿ ಪ್ರಸಾರವಾಗುತ್ತಿರುವ ಸ್ಟಾರ್ ಸೂಪರ್ ಸಿಂಗರ್ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಾಗಿಯೆ ಮೀಸಲಾದ ಒಂದು ಕಾರ್ಯಕ್ರಮವಾಗಿ ಪ್ರಸಾರವಾಗುತ್ತಿರುವುದು ಸಂಗೀತ ಪ್ರೇಮಿಗಳ ಹೆಮ್ಮೆ.
ಅಂತೆಯೇ ಝೀ ಮರಾಠಿಯಲ್ಲಿ ಪ್ರಸಾರವಾಗುವ "ಐಡಿಯಾ ಸ ರೆ ಗ ಮ ಪ", ಕನ್ನಡದ 'ಎದೆ ತುಂಬಿ ಹಾಡುವೆನು', ಮೊದಲ ಆವೃತ್ತಿಯ "ಲಿಟ್ಲ್ ಚಾಂಪ್ಸ್" ! ಹಿಂದಿಯ ಫರಾ ಕಾನ್, ಅನು ಮಲ್ಲಿಕ್ ನಡೆಸಿಕೊಡುವ ರಾಷ್ಟ್ರೀಯ ಮಟ್ಟದ ಟ್ಯಾಲೆಂಟ್ ಶೋ ! ಉದಾಹರಣೆಗಳು ಇಲ್ಲದಿಲ್ಲ.
ಅಷ್ಟೇಕೆ, ತಮಿಳು ಚಾನಲ್ ಗಳಿಂದ ಪ್ರವರ್ಧಮಾನಕ್ಕೆ ಬಂದ ಬದುಕ ಸರಣಿಗಳ ಮೆಲುಕು ಒಂದು ಮಿತಿಯ ವರೆಗೆ ಓಕೆ. ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಅಂತ ವೇದಾಂತ ಹೇಳುವ ಕಾಲ ಹೋಗಿ ಜೀವನ ಕಥೆ ಮಾತ್ರ ಅಲ್ಲ ಥ್ರಿಲ್, ಷಾಕ್ ಕೂಡಾ ಇರುತ್ತೆ ಅಂತ ಮತ್ತೊಂದು ಕಥೆ ಹೇಳುವ ಆದರ್ಶವೂ(?) ಜೊತೆಗಿದೆ.
**********
ಥ್ರಿಲ್ ಕೊಡುತ್ತೆ ಎಂದರೆ ಏನೂ ಮಾಡಲು ಸಿದ್ಧರಿದ್ದಾರೆ ಇಂದಿನ ಟಿವಿ ಮಂದಿ ! ಜೊತೆಗೆ ಟಿಆರ್ಪಿ ಕೊಡುತ್ತದೆ ಎಂದರೆ ಬಿಟ್ಟಾರೆಯೇ ! ಕೊನೆಗೆ ಧನಾರ್ಜನೆ, ಪ್ರಸಿದ್ಧಿ- ಗಳ ಭರಾಟೆಯಲ್ಲಿ ಮಾಡುವುದು ಮಾನವೀಯ ಮೌಲ್ಯಗಳ ಮಾರಾಟವಾದರೂ ಅಡ್ಡಿಯಿಲ್ಲ. ಒಂದು ರೀತಿಯ ಕಮರ್ಷಿಯಲ್ ಭಯೋತ್ಪಾದನೆ ! ; ಇದು ಖಂಡನಾರ್ಹವಷ್ಟೇ ಅಲ್ಲ ಶಿಕ್ಷಾರ್ಹವೂ ಹೌದು ಎಂದು ತಿಳಿದಿದ್ದರೂ, ನಾಗರಿಕ ಪ್ರಜ್ಞೆ ಮತ್ತು ಸಾಮಾಜಿಕ ಕಳಕಳಿಗಳು, ಸಾರ್ವಜನಿಕ ಹೊಣೆಗಾರಿಕೆ, ಸಮಷ್ಟಿ ನಿಲುವಗಳು ದಿನದಿಂದ ದಿನಕ್ಕೆ ನಲುಗುತ್ತಿವೆ. !
ಮಾಧ್ಯಮಗಳಿಗೆ ಮಾಹಿತಿ, ಶಿಕ್ಷಣ, ಮನರಂಜನೆ- ಈ ಮೂರು ಮುಖ್ಯ ವಿಭಾಗಗಳನ್ನು ಅರ್ಥ ಮಾಡಿಕೊಂಡು ವ್ಯತ್ಯಾಸ ಕಂಡುಕೊಳ್ಳಲಿಕ್ಕೆ ಬಂದರೂ ಸಾಕು, ತಾವು ನಿರ್ವಹಿಸಬೇಕಾದ ಜವಾಬ್ದಾರಿ ಅರ್ಥವಾಗುತ್ತದೆ. ಅದನ್ನು ಬಿಟ್ಟು 'ಜನರು ಚೇಂಜ್ ಕೇಳುತ್ತಾರೆ'ಎಂದು ಮನಸೋ ಇಚ್ಚೆ ಕೊಡುತ್ತ ಹೋದರೆ ಯಾವುದು ಆರೋಗ್ಯದ ಅಗತ್ಯವೋ ಅದು ಮರೆಯಾಗುತ್ತವೆ. ಬರೀ ಜಂಕ್ ಫುಡ್ ಗಳಾಗಬೇಕೆ ಮಾಧ್ಯಮ ????
*************
ಭಾರತೀಯ ನೃತ್ಯಕಲೆಗಳಲ್ಲಿ ಜೀವನದ ಅನುಸಂಧಾನಭಾರತೀಯನೃತ್ಯಕಲೆಗಳ ಅವಿಚ್ಛಿನ್ನ, ಅವಿನಾಶಿ ಪರಂಪರೆ ಜಗತ್ತಿನ ಉಳಿದೆಲ್ಲಾ ನೃತ್ಯಕಲೆಗಳಿಗೊಂದು ಆದರ್ಶ. ಅದು ಶಾಸ್ತ್ರೀಯವಾಗಿರಲಿ, ಅಥವಾ ಜಾನಪದವಾಗಿರಲಿ; ಜೀವನದ
ಭಾರತೀಯ ಮುಖಗಳನ್ನು ಸುಂದರವಾಗಿ ನಿರೂಪಿಸುವುದರೊಂದಿಗೆ ಭಾವಪ್ರಚೋದಿಸುವ ಈ ನೃತ್ಯ ಮಾಧ್ಯಮ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗಷ್ಟೆ ಅಲ್ಲ, ಬದುಕಿನ ಹಲವು ಆಯಾಮಗಳಿಗೆ ತನ್ನನ್ನು ವಿಸ್ತರಿಸಿಕೊಂಡಿದೆ. ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಸ್ತಾಪ ಋಗ್ವೇದದಲ್ಲಿ ಗುರುತಿಸಲಾಗಿದ್ದರೂ, ಋಗ್ವೇದಕ್ಕಿಂತಲೂ ಬಹಳಷ್ಟು ಪ್ರಾಚೀನವಾದುದು ಎಂಬುದನ್ನು ಕಂಡುಕೊಳ್ಳಬಹುದು. ಋಗ್ವೇದದಿಂದ ಪಠ್ಯವನ್ನು, ಯರ್ಜುವೇದದಿಂದ ಅಭಿನಯವನ್ನು, ಸಾಮವೇದದಿಂದ ಸಂಗೀತವನ್ನು, ಅಥರ್ವಣ ವೇದದಿಂದ ರಸವನ್ನು ತೆಗೆದು ಐದನೇಯ ವೇದವನ್ನಾಗಿ ನಾಟ್ಯವೇದವನ್ನು ರಚಿಸಲಾಯಿತು ಎಂದು ಪ್ರಾಚೀನ ಗ್ರಂಥಗಳು ಹೇಳಲ್ಪಟ್ಟಿವೆಯಾದರೂ, ಇಂತಹ ದೈವಿಕ ಸ್ಪರ್ಶ ಕೇವಲ ಪೂಜ್ಯತಾಭಾವನೆಗೆ ಮಾತ್ರ ಮೀಸಲಾಗಿರದೆ, ರಕ್ಷಣಾತ್ಮಕ ಚೌಕಟ್ಟನ್ನು, ಶಾಸ್ತ್ರೀಯ ಪರಂಪರೆಯನ್ನು ಕಾಯ್ದುಕೊಳ್ಳಲು ಮೂಡಿರಬಹುದೆಂದು ಇತಿಹಾಸತಜ್ಞರ ಅಭಿಪ್ರಾಯ. ಏನೇ ಇರಲಿ, ಭಾರತೀಯ ನೃತ್ಯಕಲೆಯು ಚಿತ್ರಕಲೆಯ ರೇಖಾವಿನ್ಯಾಸ, ವರ್ಣವೈಭವ, ಶಿಲ್ಪಕಲೆಯ ರೂಪ-ಲಾವಣ್ಯ, ನಟನ ದೇವನಾನುಕರಣ, ಸಂಗೀತ-ರಾಗ-ಲಯ-ಪದವಿನ್ಯಾಸ, ಕವಿಯ ಭಾವನಾವಿಲಾಸದ ಸಂಗಮವಷ್ಟೆ ಆಗಿರದೆ ಜೀವನದ ಜೊತೆಗಿನ ಅನುಸಂಧಾನವೂ ಹೌದು ಎಂಬುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಈ ಎಲ್ಲಾ ಭಾರತೀಯ ನೃತ್ಯಕಲೆಗಳಿಗೆ ಭರತಮುನಿಯ ಶಾಸ್ತ್ರವೇ ಆಧಾರವೆಂದೇ ನಂಬಲಾಗಿದ್ದರೂ, ಅದಕ್ಕೂ ಹಿಂದೆ ಶಿಲಾಲಿ, ಕೃಶಾಸ್ವರು ನಟಸೂತ್ರ ಗಳನ್ನೇ ರಚಿಸಿದ್ದರು ಎಂದು ಪಾಣಿನಿಯ ವ್ಯಾಕರಣ ತಿಳಿಸುತ್ತದೆ. ಆದರೆ ಲಭ್ಯವಿರುವ ಗ್ರಂಥಗಳ ಪೈಕಿ ಭರತನ ನಾಟ್ಯಶಾಸ್ತ್ರ ಅತೀ ಪ್ರಾಚೀನ ಮತ್ತು ಎಲ್ಲಾ ರಂಗ ಕಲೆಗಳಿಗೆ ಮಾತೃ ಗ್ರಂಥ ಎಂದೇ ನಿರ್ಧರಿಸಲ್ಪಟ್ಟಿದೆ. ಭರತ ಎನ್ನುವ ಐತಿಹಾಸಿಕ ವ್ಯಕ್ತಿ ಇದ್ದನೇ? ಇದ್ದರೆ ಯಾರು? ಎಂಬ ಜಿಜ್ಞಾಸೆ ಇಂದಿಗೂ ಸಿದ್ಧಾಂತಕ್ಕೆ ಸಿಲುಕಿಲ್ಲ. ಆದರೆ ಭರತಮುನಿಯ ಶಾಸ್ತ್ರವನ್ನು ಅವಲಂಬಿಸಿ ಬೆಳೆದು ಬಂದ ನಾಟ್ಯಸಂಪ್ರದಾಯಗಳೆಲ್ಲವೂ ಭರತನಾಟ್ಯವೇ ಆಗಿದೆ. ಹಾಗಾದರೆ ಕೇವಲ ಇಂದಿನ ಪ್ರಚಲಿತ, ಭರತನಾಟ್ಯ ಪದ್ಧತಿಯೊಂದೇ ಭರತನ ಕೊಡುಗೆ ಎನ್ನಲಾಗದು. (ಸಾದಿರ್, ದಾಸಿಆಟ್ಟಂ, ಕೇಲಿ, ನಿಲಂಬು, ದಾಸೀಕುಣಿತ ಎಂದು ಕರೆಯಲಾಗುತ್ತಿದ್ದ ನೃತ್ಯ ಪದ್ಧತಿ ಪುನರುಜ್ಜೀವನಗೊಂಡು ಭರತನಾಟ್ಯ ಎಂದು ಕರೆಸಿಕೊಂಡಿತಷ್ಟೆ ವಿನಃ; ಇಂದಿಗೂ ವಿಮರ್ಶಕರು ಭರತನೃತ್ಯ ಸಾದಿರ್ ಎಂದೇ ಕರೆಯಲು ಒತ್ತಾಯಿಸುತ್ತಿದ್ದಾರೆ, ಭರತನಾಟ್ಯವೆಂಬುದು ಶಾಸ್ತ್ರೀಯ ನೃತ್ಯದ ಒಂದು ಬಗೆ. ಅಷ್ಟೆ!)ಆದರೆ, ಇಂದಿನ ಹಲವು ಯುವ ಮನಸ್ಸುಗಳು, ಆಧುನಿಕ ಪ್ರೇರೇಪಿತ ನಿಲುವುಗಳು ಶಾಸ್ತ್ರೀಯ ನೃತ್ಯವನ್ನು ಅಸಡ್ಡೆಯಿಂದ ಕಾಣುವುದು, ಅದರಲ್ಲಿ ನವೀನವೆನಿಸುವ ಅತಿರೇಕದ ಬದಲಾವಣೆಗಳನ್ನು, ಪ್ರಯೋಗಗಳನ್ನು ಕಲ್ಪಿಸುವುದು ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ. ಈ ನಿಟ್ಟಿನಿಂದ ನಾವು ಅರ್ಥ ಮಾಡಿಕೊಳ್ಳಬೇಕಾದುದು ಒಂದೇ!... ಶಾಸ್ತ್ರೀಯವಾಗಿರುವುದರಿಂದಲೇ ಅದು ಶಾಸ್ತ್ರೀಯ ನೃತ್ಯ. ಆದರೆ ಅಷ್ಟು ಮಾತ್ರಕ್ಕೆ ಅದರ ವೈಭವೀಕರಣವೂ ಸಲ್ಲದು. ಹಾಗೆ ನೋಡಿದರೆ ಭಾರತೀಯ ನೃತ್ಯ ಪರಂಪರೆಗಳಲ್ಲಿ ಇಂದಿಗೂ ೧೫೦೦ರಷ್ಟು ಜಾನಪದ ನೃತ್ಯದ ಸಂಪತ್ತು ಇದೆ. ಅದರಲ್ಲಿನ ಧಾರ್ಮಿಕ ಅಂಶ ಕಡಿಮೆಯಾಗುತ್ತಿದ್ದರೂ, ಜಾನಪದದ ವರ್ಣವೈವಿಧ್ಯ, ಸರಳತೆ, ಸ್ಫೂರ್ತಿ, ಲಯ-ಗತಿ, ಸಾತ್ವಿಕ ಆನಂದದಿಂದಾಗಿ ತೇಜಸ್ಸು ಕಡಿಮೆಯಾಗಿಲ್ಲ. ಜನಜೀವನದ ಪ್ರಮುಖ ಅಂಗವಾಗಿ ಸಂಸ್ಕೃತಿಯ ಅವಿಭಾಜ್ಯ ಅಂಶವಾಗಿ, ಆಕರ್ಷಣೀಯವಾಗಿರುವ ಇಂತಹ ನೃತ್ಯಗಳು ವೈವಿಧ್ಯತೆ, ಭಿನ್ನತೆ, ವ್ಯತ್ಯಾಸಗಳನ್ನು ತನ್ನೊಡಲಲ್ಲಿ ಕಾಯ್ದುಕೊಂಡು ರಂಜನೀಯವಾಗಿದೆ. ಇಂತಹ ಭಿನ್ನತೆಗಳು ಭಾರತೀಯ ಸಂಸ್ಕೃತಿಯ ಏಕತೆಯ ಮೂಲರೂಪ. ಅಂತೆಯೇ ಒಂದೊಂದು ಪ್ರಾಂತ್ಯದ ಜನಜೀವನ, ಲಕ್ಷಣ, ಸ್ಥಳೀಯ ಸ್ಥಿತಿಗತಿ, ಅವಶ್ಯಕತೆಗಳ ಫಲವಾಗಿ ಆಯಾಯ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯಗಳು ಮೈಗೂಡಿದವು. ಕೂಚಿಪುಡಿ, ಕಥಕ್ಕಳಿ, ಮೋಹಿನಿ ಆಟ್ಟಂ, ಮಣಿಪುರಿ, ಕಥಕ್, ಅಷ್ಟೇಕೆ ನಾಟ್ಯಶಾಸ್ತ್ರವನ್ನೇ ಅವಲಂಬಿಸಿರುವ ಕರ್ನಾಟಕದ ಯಕ್ಷಗಾನ, ಅಸ್ಸಾಮಿನ ಚೌ, ಸತ್ರಿಯಾ, ಕೊರವಂಜಿ, ಭಾಗವತಮೇಳ ನೃತ್ಯಗಳು ಶಾಸ್ತ್ರೀಯ ನೃತ್ಯಗಳೇ ಸರಿ! ಜೊತೆಗೆ ಸಾಮಾಜಿಕ, ಸಮಕಾಲೀನ ವಸ್ತು ನಿರೂಪಕಗಳು ನೃತ್ಯರೂಪಕವೆಂಬ ಆಕರ್ಷಕ ವಿಧಾನದ ಮೂಲಕ ಅಸ್ತಿತ್ವ ಪಡೆದುಕೊಂಡು ಶಾಸ್ತ್ರೀಯ ಶೈಲಿಯೆನಿಸಿದವು. ಹಾಗೆ ನೋಡಿದರೆ ಉತ್ತರ ಭಾರತಕ್ಕೆ ಪರರ ಆಕ್ರಮಣದ ಫಲವಾಗಿ ಅಲ್ಲಿನ ನೃತ್ಯಕಲೆಗಳು ಹೆಚ್ಚಾಗಿ ಪರಕೀಯರ ಪ್ರಭಾವ ಪಡೆದುಕೊಂಡಿವೆ. ದಕ್ಷಿಣ ಭಾರತದ ನೃತ್ಯಸಂಪ್ರದಾಯಗಳು ಸಾಕಷ್ಟು ಮೂಲ ಸಂಪ್ರದಾಯ ಪರಿಶುದ್ಧತೆಯನ್ನು ಉಳಿಸಿಕೊಂಡಿದೆ.ಮೋಕ್ಷಕ್ಕೆ ಸಾಧನ, ಪ್ರಾರ್ಥನಾ ಸ್ವರೂಪ ಎಂದೆನಿಸಿಕೊಂಡಿರುವ ಇಂತಹ ಶಾಸ್ತ್ರೀಯ, ಸಾಂಪ್ರದಾಯಿಕ ನೃತ್ಯಗಳು ಜೀವನ ಮೌಲ್ಯಗಳನ್ನು ಪುನರ್ವಿಮರ್ಶಿಸುವಂತವು. ಇಂದಿನ ಆಧುನಿಕ ಯುಗದಲ್ಲೂ ಎಲ್ಲಾ ದೃಷ್ಟಿಯಿಂದಲೂ ಜನಜೀವನಕ್ಕೆ ಅಗತ್ಯವೆನಿಸುವಂತವು, ಕೆಲವೊಂದು ನೃತ್ಯಗಳು ಆಯಾಕಾಲದ ಪ್ರಗತಿಗೆ ಸಾಕ್ಷಿಯಾಗಿ, ತನ್ನ ಬದುಕಿನ ಯುಗವನ್ನು ಬಿಂಬಿಸುತ್ತವೆ. ಉದಾ: ಏಕವ್ಯಕ್ತಿ ಯಕ್ಷಗಾನದ ಪ್ರಸ್ತುತತೆ. ಅಂತವು ಆಯಾಕಾಲದ ಅವಶ್ಯಕತೆ, ವೈವಿಧ್ಯತೆಗಳಿಗೆ ಅಗತ್ಯವೂ ಕೂಡಾ!..ಅಷ್ಟಕ್ಕೂ ಭಾರತೀಯ ಸಂಪ್ರದಾಯವೆಂಬುದು ಶಿಸ್ತಿನ ಕಟ್ಟುಪಾಡುಗಳಿಂದ ಕೂಡಿದ್ದಲ್ಲ ಸ್ವತಃ ಭರತಮುನಿಯೇ ತನ್ನ ಗ್ರಂಥದಲ್ಲಿ ಪಾಂಡಿತ್ಯ, ಅನುಭವ, ಲೋಕಜ್ಞಾನದಿಂದ ನೃತ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು ಎಂದಿದ್ದಾನೆ. ಹಾಗಾಗಿ ಸ್ವಾತಂತ್ರ್ಯದ ಅಭಿವ್ಯಕ್ತಿ ಭಾರತೀಯ ಕಲೆಗಳ ಮೂಲಸ್ರೋತವೂ ಹೌದು. ಜೊತೆಗೆ ಪರಂಪರೆಯ ರಕ್ಷಣೆ, ಪ್ರಗತಿಯ ಸೂಕ್ಷ್ಮಗಳನ್ನು ಅರಿತುಕೊಳ್ಳಬೇಕಾದ್ದು ನಮ್ಮ ಕರ್ತವ್ಯವೂ ಕೂಡಾ. ಅಷ್ಟಕ್ಕೂ ಸ್ವಾತಂತ್ರ್ಯವೆಂದರೆ ಸ್ವೇಚ್ಛೆಯಲ್ಲವಲ್ಲ!ಭಾರತೀಯ ನೃತ್ಯಗಳೂ ಹಲವು ಸ್ಥಿತ್ಯಂತರಕ್ಕೆ ಒಳಪಟ್ಟಿವೆ. ಸ್ವಾತಂತ್ರ್ಯಾ ನಂತರವಂತೂ ಅಂಟಿದ್ದ ಕಳಂಕಗಳ ಬೇಡಿಯನ್ನು ಸ್ವಲ್ಪ ಸ್ವಲ್ಪವಾಗಿಯೇ ಬಿಡಿಸಿಕೊಳ್ಳುತ್ತಾ ಜನಾದರಣೆ, ಪ್ರೆತ್ಸಾಹವನ್ನು ಪಡೆದುಕೊಂಡಿವೆ. ಆದರೆ ನಾಗರೀಕತೆಯ, ಪರಕೀಯತೆಯ ಗಾಳಿಗೆ ಕಲುಷಿತಗೊಳ್ಳದಂತೆ ಪರಿಶುದ್ಧವಾಗಿ ಉಳಿಸಿಕೊಳ್ಳುವುದೂ ಸಂಸ್ಕೃತಿಯ ಬಗೆಗೆ ನಾವು ನಿರ್ವಹಿಸಬೇಕಾದ ಕರ್ತವ್ಯ.ಪ್ರಸ್ತುತ ಕಾಲದಲ್ಲಿ ನೃತ್ಯಶೈಲಿಯನ್ನು ಕರಗತ ಮಾಡಿಕೊಳ್ಳಲು ಬೇಕಾದ ಸಂಯಮ, ಶ್ರದ್ಧೆ, ನಿಷ್ಟೆ, ಏಕಾಗ್ರತೆ, ಅರ್ಪಣಾಭಾವಗಳು ಮರೆಯಾಗಿ ಅವಕಾಶವಾದಿಗಳು, ಅಪ್ರಬುದ್ಧರು ಅಟ್ಟಣಿಗೆ ಏರುತ್ತಾ ನೃತ್ಯಸಂಪ್ರದಾಯಕ್ಕೆ ಹೊಸತೆನಿಸುವ ಕಳಂಕವನ್ನು ಅಂಟಿಸುತ್ತಿದ್ದಾರೆ. ಎಲ್ಲಾ ನೃತ್ಯಶೈಲಿಗಳಲ್ಲೂ ನಿಪುಣರೆಂದು ತೋರಿಸಿಕೊಳ್ಳುವ ಆಶೆಯಲ್ಲಿ ಪರಂಪರೆಯನ್ನು ಮರೆಯುತ್ತಿರುವುದಲ್ಲದೆ, ಪೌರಾತ್ಯದ ಬೆರಕೆ, ವ್ಯಾಪಾರೀಕರಣ ನೃತ್ಯಶೈಲಿಯ ಪ್ರಮುಖ ಸಮಸ್ಯೆ ಮತ್ತು ಸವಾಲು.ಆದರೆ ಇಂತಹ ತಾಳ್ಮೆ ಎಲ್ಲದರಂತೆ ನೃತ್ಯರಂಗದಲ್ಲೂ, ಮುಂದುವರಿದರೆ ಶಾಸ್ತ್ರೀಯ-ಸಂಪ್ರದಾಯ-ಜನಪದಗಳ ಅಸ್ತಿತ್ವವಷ್ಟೆ ಅಲ್ಲ. ನಮ್ಮ ಅಸ್ತಿತ್ವವನ್ನು ಅದರೊಂದಿಗೆ ಕಳೆದುಕೊಳ್ಳಬೇಕಾದೀತು. ಕಲೆಯ ಪ್ರಗತಿ ಪರಂಪರೆಯ ಸುಭದ್ರ ಬುನಾದಿಯ ಮೇಲೆ ಭಾರತೀಯವಾಗಿ ಮುಂದುವರಿದರಷ್ಟೆ ಅದು ಅರ್ಥಪೂರ್ಣ, ಪರಿಪೂರ್ಣ, ಅವಿನಾಶಿ... ಅಲ್ಲವೇ?
(ಚೈತ್ರರಶ್ಮಿ ಪತ್ರಿಕೆಯ ೫೦ ನೆ ಸಂಚಿಕೆಯಲ್ಲಿ ಪ್ರಕಟವಾದ ಲೇಖನ )
ಭಾರತೀಯ ನೃತ್ಯ ಕಲೆ : ಭವಿತವ್ಯಕ್ಕೊಂದು ಆಸರೆ
ದೇಶವೊಂದರ ಸಾಂಸ್ಕೃತಿಕ ಔನ್ನತ್ಯವನ್ನು, ನಾಗರೀಕತೆಯ ವ್ಯಾಪ್ತಿಯನ್ನು ಆ ದೇಶದ ಪ್ರದರ್ಶಿತ ಕಲೆಯಿಂದ ಅರಿತುಕೊಳ್ಳಬಹುದು. ಅಷ್ಟಕ್ಕೂ ದೇಶವೊಂದರ ಕಲೆಗಳು ಬೆಳೆಯುವುದೇ ಅಲ್ಲಿನ ಆಧ್ಯಾತ್ಮಿಕ, ನಾಗರೀಕ, ಸಾಂಸ್ಕೃತಿಕ ಅಗತ್ಯ ಮತ್ತು ಸತ್ಯಗಳನ್ನು ಕಂಡುಕೊಂಡು. ಹಾಗಾದ್ದರಿಂದಲೇ ಭಾರತದ ಭಾಷೆಗಳು ನಾಗರೀಕತೆಯ ಉಗಮದಿಂದ ಇಲ್ಲಿಯವರೆವಿಗೂ ಶಾಬ್ದಿಕವಾಗಿಯಷ್ಟೇ ಅಲ್ಲದೆ, ಅಶಾಬ್ದಿಕವಾಗಿಯೂ ಪ್ರಬಲವಾಗಿ ತನ್ನ ಅಸ್ತಿತ್ವವವನ್ನು ವಿವಿಧ ರೂಪಗಳಲ್ಲಿ ಉಳಿಸಿಕೊಂಡು ಬಂದಿದೆ. ಜೊತೆಗೆ ಭಾಷೆಯು ತನಗೆ ಬೇಕಾದ ಸನ್ನಿವೇಶಗಳನ್ನು, ಸಂಕೇತಗಳನ್ನು ಆವಾಹಿಸಿಕೊಂಡಿದ್ದರಿಂದಾಗಿ ಅದಕ್ಕೆ ಪೂರಕವಾದ ಅಪ್ರಜ್ಞಾಪೂರ್ವಕ ದೇಹಭಾಷೆಗಳ ಬೆಳವಣಿಗೆಯಾಯಿತು. ಅಂತಹ ಅಂಗಭಂಗಿಗಳನ್ನು ಪರಿಣಾಮಕಾರಿಯಾಗಿ ಬಿಂಬಿಸಿ ಅತ್ಯಾಕರ್ಷಕವಾಗಿ ಮನರಂಜನೆಯೊಂದಿಗೆ ಮಾಹಿತಿ, ಶಿಕ್ಷಣವನ್ನೂ ಕೊಂಡೊಯ್ಯುವ ಕಾರ್ಯ ನೃತ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಲೇ ಬಂದಿದೆ.
ನೃತ್ಯಕಲೆ ತಾಳ-ಅಭಿನಯ-ಅಂಗವಿನ್ಯಾಸಗಳ ಸಮ್ಮಿಳಿತ ಕಲೆ, ಆದ್ದರಿಂದ ಕೇವಲ ಶ್ರವ್ಯದಿಂದ ಮಾತ್ರವಲ್ಲದೆ ದೃಶ್ಯದಿಂದ ಮಾನವನ ಮನಸ್ಸಿನ ಮೇಲೆ ಆಳವಾಗಿ ಪರಿಣಾಮ ಬೀರಬಲ್ಲ ಕಲೆ ನೃತ್ಯ. ನೃತ್ಯ ಕಲೆಯು ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ, ನೈತಿಕವಾಗಿ, ಸಾಂಸ್ಕೃತಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿ ಒಂದು ಆರೋಗ್ಯಯುತ ಮನಸ್ಸುಗಳನ್ನು ಸೃಷ್ಠಿ ಮಾಡಬಲ್ಲುದು. ಜಾತಿಮತಗಳ ಭೇದವಿಲ್ಲದೆ, ಮೇಲುಕೀಳು ಭಾವನೆಯಿಲ್ಲದೆ ಈ ಕಲೆಯನ್ನು ಕಲಿಯಲು, ನೋಡಲು ಸಾಧ್ಯ. ಅದರಲ್ಲೂ ಅದರ ಇತಿಹಾಸ, ಭವ್ಯತೆ, ಶಾಸ್ತ್ರೀಯ ಚೌಕಟ್ಟು, ಜಾನಪದೀಯ ಹಿನ್ನಲೆ, ವೇಷಭೂಷಣಗಳು ಆಯಾಯ ಸಮಾಜದ ಗುಣ-ಅವಗುಣಗಳನ್ನು ತಿಳಿಸುವ ಮಾರ್ಗಸೂಚಿಯೂ ಹೌದು. ಅದರ ತಾಳ, ಗಾನ, ಅಭಿನಯ, ಲಯ, ಮಾತು ಇತ್ಯಾದಿ..,ಒಂದೇ ಸಮಯದಲ್ಲಿ ಹಲವು ಭಾವಗಳನ್ನು ವಿಷಯಗಳನ್ನು ತಿಳಿಯಪಡಿಸುವ ಸಾಧನ. ಹಾಗೆಯೇ ಸರಳ ಸುಂದರ ರೀತಿಯಲ್ಲಿ ಸಮಾಜದ ಓರೆಕೋರೆಗಳ ಬಗ್ಗೆ ತಿಳಿವಳಿಕೆಯಿತ್ತು, ತಿದ್ದುವ ಕೆಲಸ ಈ ಕಲೆಯಿಂದ ಸಾಧ್ಯ.
ಹಾಗಾಗಿ ನೃತ್ಯವು ಮಾನವನ ನೀತಿ, ರೀತಿ, ತತ್ವ, ಸರಸ-ಸಂಭಾಷಣೆ, ಪ್ರಾರ್ಥನೆ, ನಿಲುವು…ಹೀಗೆ ಹತ್ತು ಹಲವು ವಿಷಯಗಳನ್ನು ಸರಳ-ಸುಂದರ ರೀತಿಯಲ್ಲಿ ಮನಸ್ಸಿಗೆ ತಲುಪಿಸಲು ಸಾಧ್ಯವಾಗಿದೆ. ಜೊತೆಗೆ ಭಾರತದ ಉದ್ದಗಲಕ್ಕೂ ಇರುವ ಪ್ರಾಚೀನ ದೇವಾಲಯಗಳಲ್ಲಿ ನೃತ್ಯಭಂಗಿಗಳ ಶಿಲ್ಪಗಳನ್ನು ಅಸಂಖ್ಯಾತವಾಗಿ ಕಾಣಬಹುದಾಗಿದೆ. ಶಿಲ್ಪದಲ್ಲಿನ ಸೂತ್ರಗಳಿಗೆ ಸಮವಾಗಿ ನಾಟ್ಯಭಂಗಿಗಳು ಪ್ರೇರಿತವಾಗಿವೆ ಎನ್ನಲಾಗಿದೆ. ಈ ಎಲ್ಲಾ ಶಿಲ್ಪಗಳು ಮಾನವ ಜೀವನದ ಸಾಮಾನ್ಯ ವಿಷಯಗಳೊಂದಿಗೆ ಹಲವು ಭಾವಗಳನ್ನು, ಅನುಭಾವಗಳನ್ನು, ವಿಷಯಗಳನ್ನು, ಲೌಕಿಕ ರೀತಿನೀತಿಗಳನ್ನು ಪ್ರತಿಪಾದಿಸಿರುವುದನ್ನು ಕಾಣುತ್ತೇವೆ.
ಜೀವನ ಸಂಸ್ಕೃತಿಯಲ್ಲಿ ಪ್ರತೀ ಸನ್ನಿವೇಶವೂ ಒಂದು ನಾಟ್ಯದ ವಸ್ತುವಾಗಿ ಕಾಣಿಸುವುದು ನಾಟ್ಯದ ಹೆಚ್ಚುಗಾರಿಕೆ. ಸಾಹಿತ್ಯ, ಶಿಲ್ಪಕಲೆ, ಪುರಾಣ, ಸಂಗೀತ, ರಾಜಮನೆತನ, ಸಾಮಾಜಿಕ ಜೀವನ ಹೀಗೆ ಪ್ರತಿಯೊಂದರಲ್ಲೂ ನಾಟ್ಯದ ಕೊಡುಗೆ ಮಹತ್ವ ಪೂರ್ಣವಾಗಿ ಗೋಚರಿಸುತ್ತದೆ. ಆ ಮೂಲಕ ನೃತ್ಯ ತಾನೊಂದು ಭಾಷಾ ಮಾಧ್ಯಮ ಎಂಬುದನ್ನೂ ದೃಢಪಡಿಸುತ್ತದೆ.
ಕ್ರಿ.ಪೂ. ೨ನೇ ಶತಮಾನದಲ್ಲಿ ರಚಿತವಾಯಿತೆನಿಸುವ ಭರತಮುನಿಯ ನಾಟ್ಯಶಾಸ್ತ್ರದ ಆಧಾರದಲ್ಲಿ ಭಾರತದಲ್ಲಿ ಅನೇಕ ನೃತ್ಯ ಪ್ರಕಾರಗಳು ರೂಪುಗೊಂಡಿತಾದರೂ, ಅದಕ್ಕೂ ಮುಂಚೆ ಪಾಣಿನಿ, ಕೃಶಾಶ್ವರು ಬರೆದ ಸೂತ್ರಗಳಿತ್ತೆನ್ನಲಾಗಿದೆ. ಆದರೆ ಅವೆಲ್ಲವನ್ನೂ ಒಂದೇ ಸೂತ್ರದಲ್ಲಿ ಹಿಡಿದಿಡುವ ಕೆಲಸ ಭರತಮುನಿಯಿಂದಾಯಿತೆನ್ನಬಹುದು. ನಾಲ್ಕು ವೇದಗಳಿಂದ ಪಠ್ಯ, ಗಾನ, ರಸ, ಲಯ ಮುಂತಾದವುಗಳನ್ನು ಆರಿಸಿಕೊಂಡು ಐದನೇಯ ವೇದ ನಾಟ್ಯವೇದವನ್ನು ರಚಿಸಿದನೆಂಬುದು ಐತಿಹ್ಯ.
ಕ್ರಮೇಣ ನಾಟ್ಯಶಾಸ್ತ್ರವನ್ನು ಆಧರಿಸಿ ಪ್ರಾಂತೀಯ ಜನಜೀವನ- ಸಂಸ್ಕೃತಿಯ ಪ್ರಭಾವದಿಂದ, ವಿವಿಧ ರೀತಿಯಲ್ಲಿ ನೃತ್ಯ ಪ್ರಕಾರಗಳು ಸೃಜನೆಯಾದವು. ಹಾಗಾಗಿ ನಾಟ್ಯಕಲೆ ಹರಿದುಬಂದ ಕಥೆಯಲ್ಲಿ ಭರತನು ಕಾವ್ಯದೃಷ್ಟಿ, ಧರ್ಮದೃಷ್ಟಿ ರಸದೃಷ್ಟಿಗಳನ್ನು ಕೊಡುವುದಷ್ಟೇ ಅಲ್ಲದೆ ಲೌಕಿಕ ಪ್ರಜ್ಞೆಯನ್ನು ನೀಡಿದ್ದಾನೆ. ಅಷ್ಟು ಮಾತ್ರವಲ್ಲದೆ, ಭಾರತೀಯ ಪರಿಭಾಷೆಯಲ್ಲಿ ಭರತನು ನೀಡಿದ ಕೊಡುಗೆಗಳ ಪೈಕಿ ಸಾಧಾರಣೀಕರಣ ಎನ್ನುವ ಸಂವಹನ ನೀತಿ ತತ್ವವು ಪ್ರಪಂಚದ ಸಂವಹನ ಕ್ಷೇತ್ರಕ್ಕಿತ್ತ ಮಹತ್ವದಕಾಣಿಕೆ. ವೈಯಕ್ತಿಕ ಸಾಧ್ಯತೆಗಳಿಂದ ಅನಂತತೆಗೆ, ವೈವಿಧ್ಯತೆಗಳಿಂದ ಏಕತೆಗೆ ಕೊಂಡೊಯ್ಯುವಲ್ಲಿ ಈ ಸಾಧಾರಣೀಕರಣ ಬಹು ಮುಖ್ಯ ಪಾತ್ರ ವಹಿಸುತ್ತದೆ.
ಕಾಲಾನಂತರದಲ್ಲಿ ಭರತನ ನಾಟ್ಯಶಾಸ್ತ್ರವಷ್ಟೇ ಅಲ್ಲದೆ ನಂದಿಕೇಶ್ವರನ ಅಭಿನಯ ದರ್ಪಣ, ಪುಂಡರೀಕ ವಿಠಲನ ನರ್ತನ ನಿರ್ಣಯ, ಸಾರಂಗಧರನ ಸಂಗೀತ ರತ್ನಾಕರ, ಭರತಾರ್ಣವ, ಹಸ್ತ ಲಕ್ಷಣ ದೀಪಿಕ.., ಹೀಗೆ ಹತ್ತು ಹಲವು ಗ್ರಂಥಗಳು ವಿವಿಧ ಬಗೆಯ ನೃತ್ಯ ಪದ್ಧತಿಗಳಿಗೆ ಆಕರವಾದವು. ಭರತನಾಟ್ಯವು ಅಭಿನಯ ದರ್ಪಣವನ್ನು ಮುಖ್ಯವಾಗಿ ಅವಲಂಬಿಸಿದರೆ ಮೋಹಿನಿಯಾಟ್ಟಂ, ಕಥಕ್ಕಳಿಂiiಂತಹ ನೃತ್ಯ ಪ್ರಕಾರಗಳು ಅವಲಂಬಿಸಿದ್ದು ಹಸ್ತಲಕ್ಷಣ ದೀಪಿಕಾವನ್ನು.
ಆರಂಭದಲ್ಲಿ ಜನಜೀವನದ ಮಾಮೂಲಿ ನೃತ್ಯಗಳಾಗಿದ್ದು, ಕಾಲಾಂತರದಲ್ಲಿ ಪರಿಷ್ಕರಣೆಗೊಳಪಟ್ಟವುಗಳೇ ಇಂದಿನ ಎಲ್ಲಾ ಬಗೆಯ ಶಾಸ್ತೀಯ ನೃತ್ಯಗಳು. ಇವುಗಳ ಬಳಕೆ, ಮತ್ತು ಪ್ರೋತ್ಸಾಹ ವಿವಿಧ ದೇಶ-ಕಾಲದಲ್ಲಿ ನಡೆದು ಅನೇಕ ಸ್ಥಿತ್ಯಂತರಗಳಿಗೆ, ಕಾಲಕ್ರಮೇಣ ಒಂದು ಸಂಪ್ರದಾಯದ ಚೌಕಟ್ಟಿಗೆ ಒಳಪಟ್ಟು ಶಾಸ್ತ್ರೀಯ-ಸಂಪ್ರದಾಯಯನ್ನು ಪಡೆದವು. ಸಮಾಜದ ಉನ್ನತಿಗೆ, ವ್ಯಕ್ತಿತ್ವ ವಿಕಸನೆಗೆ, ಸೌಂದರ್ಯಾನುಭವಕ್ಕೆ ರೂಪುಗೊಂಡ ಇಂತಹ ಪದ್ಧತಿಗಳಲ್ಲಿ ತಮಿಳುನಾಡಿನ ಭರತನಾಟ್ಯ, ಆಂಧ್ರದ ಕೂಚುಪುಡಿ, ಒರಿಸ್ಸಾದ ಒಡಿಸ್ಸಿ, ಕೇರಳದ ಕಥಕ್ಕಳಿ ಮತ್ತು ಮೋಹಿನಿಯಾಟ್ಟಂ, ಮಣಿಪುರದ ಮಣಿಪುರಿ, ಉತ್ತರಭಾರತದ ಕಥಕ್, ಅಸ್ಸಾಂನ ಸತ್ರಿಯಾ, ಕರ್ನಾಟಕದ ಯಕ್ಷಗಾನಗಳು ಕೂಡಾ ಒಂದೊಮ್ಮೆ ಜನಪದದ ಹರಿವಿನಿಂದ ಶಾಸ್ತ್ರೀಯ ನಡೆವಳಿಕೆಗಳಿಗೆ ಚಾಚಿಕೊಂಡಿರಬಹುದಾದ ಎಲ್ಲಾ ಸಾಧ್ಯತೆಗಳನ್ನು ಪ್ರಕಟಪಡಿಸಿವೆ. ಹೀಗೆ, ಕಲಾವಿದನ ಶಕ್ತಿಯು ಆಯಾಯ ದೇಶದ ಸ್ಥಿತಿಗತಿಗಳ, ರಾಜಕೀಯ, ಆರ್ಥಿಕ, ಮತ್ತು ಸಂಸ್ಕೃತಿಯನ್ನು ಅವಲಂಬಿಸಿರುತ್ತದೆ.
ಇಂದಿನ ಶಾಸ್ತ್ರೀಯ ನೃತ್ಯಗಳ ಒಂದೊಂದು ಅಂಶವೂ ಸೂಕ್ಷ್ಮಾವಲೋಕನದಿಂದ, ನಿಯಮ ವಿಧಿಗಳಿಗೆ ಬದ್ಧವಾಗಿ, ಶಾಸ್ತ್ರೀಯ ಸೂತ್ರಗಳನ್ನು ಹೊಂದಿದ ಪರಿಷ್ಕೃತ ಪದ್ಧತಿಯನು ಒಳಗೊಂಡಿದ್ದು; ಬಹಳಷ್ಟು ಹಿಂದಿನಿಂದಲೇ ಗೌರವಕ್ಕೆ ಅರ್ಹವಾದ ಕಲೆಗಳಾಗಿದ್ದವು ಎನ್ನುವುದು ಗಮನಾರ್ಹ. ಒಂದು ಕಾಲದಲ್ಲಿ ಸಾಮಾನ್ಯ ಜನರ ಅಭಿವ್ಯಕ್ತಿಯ ಸಾಧನವಾಗಿದ್ದು, ಜನಪದವೇ ಆಗಿದ್ದಿರಬಹುದೆನ್ನಲಾದ ಇಂದಿನ ಶಾಸ್ತ್ರೀಯ ನೃತ್ಯಗಳು, ಕಾಲಾನುಕ್ರಮದಲ್ಲಿ ಹಲವು ಪರಿಷ್ಕರಣೆಗೊಳಪಟ್ಟು, ಬದಲಾವಣೆಗಳಿಗೆ ಒಗ್ಗಿಸಿಕೊಂಡು ಒಂದು ಸಿದ್ಧ ಪರಂಪರೆಯ ರೂಪಕ್ಕೆ ಬಂದಿದ್ದೇ ಅವುಗಳ ಇಂದಿನ ಅಸ್ತಿತ್ವಕ್ಕೆ ಕಾರಣ. ಹಾಗಾಗಿ ನಾಟ್ಯಶಾಸ್ತ್ರದ ಹಿನ್ನಲೆಯಲ್ಲಿ ಬೆಳೆದು ಬಂದ ಕಲೆಗಳಾದ ನೃತ್ಯ ಪದ್ಧತಿಗಳನ್ನು ಕೇವಲ ಶಾಸ್ತ್ರೀಯ ಪರಿಭಾಷೆಯಾಗಿ ನೋಡದೆ ಅದರ ವ್ಯಾಪ್ತಿಯ ಬಗ್ಗೆ, ಸಾಧಾರಣೀಕರಣ ಪ್ರಸ್ತಾಪಿಸುವ ಅಂಶಗಳಿಗೆ ಎಷ್ಟು ಪೂರಕವಾಗಿ ನಡೆದುಕೊಳ್ಳುತ್ತದೆ ಎಂಬ ಬಗ್ಗೆ ಮತ್ತು ಈಗಾಗಲೇ ಅಸ್ತಿತ್ವದಲ್ಲಿದ್ದರೂ ತೆರೆಮರೆಗೆ ಸರಿಯುತ್ತಿರುವ ಅದರ ಸಂವಹನ ಅನುಕೂಲ ಅಂಶಗಳ ಕುರಿತಾಗಿ ಮತ್ತಷ್ಟು ಅಧ್ಯಯನಗಳು ನಡೆಯಬೇಕಾಗಿವೆ. ಬದಲಾವಣೆಯ ಕಾಲಘಟ್ಟಕ್ಕೆ ಪೂರಕವಾಗಿ ನಡೆಯಬೇಕೆಂಬ ಉದ್ದೇಶಗಳನ್ನಿಟ್ಟು ನಡೆದರೆ ಕಲೆಯು ಕೇವಲ ಸಾಂಪ್ರದಾಯಿಕ, ಸಾಂಸ್ಕೃತಿಕ ಅಗತ್ಯಗಳನ್ನಷ್ಟೇ ಪೂರೈಸುವುದಕ್ಕೆ ಸೀಮಿತವಾಗದೆ ಸಾಮಾಜಿಕ ಅಗತ್ಯ ಮತ್ತು ಪ್ರಜ್ಞೆಯನ್ನು ಪೂರೈಸಿಕೊಂಡು, ಪ್ರಸ್ತುತವೆನಿಸುತ್ತದೆ.
ಕಲೆ ನಿಂತ ನೀರಲ್ಲ. ನೃತ್ಯ ಪದ್ಧತಿಗಳು ಉಗಮವಾದಾಗಿನಿಂದಲೂ ಸಾಕಷ್ಟು ಚಲನೆಗಳಿಗೆ ಸಾಕ್ಷಿಯಾಗಿದೆ. ಕಲೆಯ ಮತ್ತು ಅದರೊಂದಿಗಿನ ಜೀವನಪ್ರೀತಿಯನ್ನು ಪೋಷಿಸುವ ಮತ್ತು ನಿತ್ಯ ನವೀಕರಿಸಿಕೊಳ್ಳುವ ದೃಷ್ಟಿಯಿಂದ ಮುನ್ನಡೆದರಷ್ಟೇ ಕಾರ್ಯಗಳು ಜೀವನಮುಖಿಯೆನಿಸಿಕೊಳ್ಳುತ್ತದೆ. ಭರತನೇ ತನ್ನ ನಾಟ್ಯಶಾಸ್ತ್ರದಲ್ಲಿ ಕಾಲಾನುಕೂಲಕ್ಕೆ ಅಗತ್ಯವಿದ್ದಂತೆ ಜನಜೀವನದ ಮಾರ್ಪಾಡುಗಳಿಗೆ ಅನುಗುಣವಾಗಿ ನೃತ್ಯ ಸಂಸ್ಕೃತಿಯಲ್ಲೂ ಬದಲಾವಣೆಗಳನ್ನು ತಂದುಕೊಳ್ಳಬಹುದಾಗಿದೆ ; ತಾನು ಪ್ರಸ್ತಾಪಿಸಿರುವ ಅಂಶಗಳೇ ಸಾರ್ವಕಾಲೀನ ಮಾನದಂಡವಲ್ಲ ಎಂದಿದ್ದಾನೆ. ಆದರೆ ಶತಶತಮಾನಗಳಿಂದಲೂ ಪೂಜಾ ಮಂದಿರ, ರಾಜರ ಆಶ್ರಯಗಳಲ್ಲಿ ಬೆಳೆದು ಬಂದು ಕ್ರಮೇಣ, ಸ್ವಹಿತಾಸಕ್ತಿಗಳಿಂದಾಗಿ ಕಳೆದ ಶತಮಾನದ ಪೂರ್ವ ಮತ್ತು ಮಧ್ಯಕಾಲದಲ್ಲಿ ಸೊರಗಿ ಹೋಯಿತು. ಪರಕೀಯರ ದಾಳಿ ಆಗುವವರೆಗೂ ರಾಜಶ್ರಯದಲ್ಲಿದ್ದ ಕಲೆಗಳು ಮತ್ತಷ್ಟು ಬಿಗಡಾಯಿಸಿದವು. ದೈವಿಕಭಾವದ ಕಲೆಗೆ ಕಾಮುಕತೆಯ ಲಕ್ಷಣಗಳು ಅಂಟಿಕೊಂಡು. ಕೀಳುಮಟ್ಟದ ಜೀವನಕ್ಕೆ ಸಾಕ್ಷಿಯಾಯಿತು. ಅಸಡ್ಡೆ, ತಿರಸ್ಕಾರ, ಮರ್ಯಾದೆಗೆ ಯೋಗ್ಯವಲ್ಲ ಎಂಬ ನೀತಿ ನೃತ್ಯಕ್ಷೇತ್ರದಲ್ಲಿ ವ್ಯಾಪಕವಾಗಿ ಹಬ್ಬಿತ್ತು.
ನಂತರ ಹಲವು ಸುಧಾರಕರ ಕರಕುಶಲತೆಗೆ ಕನ್ನಡಿಯಾಗಿ ಇಂದು ನಾವೇನು ಕಾಣುತ್ತಿದ್ದೇವೆಯೋ ಈ ಭವ್ಯ ಹೊಸಿಲಿಗೆ ಬಂದು ನಿಂತಿದೆ. ಉದಾ : ದೇವದಾಸಿಯರ ಕಳಪೆ, ನಿರ್ಲಕ್ಷಿತ ಜೀವನದಡಿ ಸಾದಿರ್, ಕೂತ್ತು ಎಂಬೆಲ್ಲಾ ಹೆಸರುಗಳಿಂದ ಕಳೆಗುಂದಿ ನಲುಗಿ ಹೋಗಿದ್ದ ದಕ್ಷಿಣ ಭಾರತದ ಸಾದಿರ್, ಕೂತ್ತು, ದಾಸಿಆಟ್ಟಂ ಎಂದು ಕರೆಸಿಕೊಳ್ಳುತ್ತಿದ್ದ ಮುಖ್ಯ ನೃತ್ಯ ಪ್ರಕಾರವೊಂದಕ್ಕೆ ೧೯೫೦ರ ದಶಕಗಳಲ್ಲಿ ರುಕ್ಮಿಣೀದೇವಿ ಅರುಂಡೇಲ್, ಕೃಷ್ಣ ಅಯ್ಯರ್ ಮುಂತಾದವರು ಭರತನಾಟ್ಯವೆಂಬ ಹೆಸರನ್ನಿತ್ತು, ಮರುಜ್ಜೀವ ಕೊಟ್ಟು ಸಾಕಷ್ಟು ಪರಿಷ್ಕರಿಸಿದರು.
ಕಾಲ ಬದಲಾಗಿದೆ., ಕಾಲ-ನೆಲೆಗಳಿಂದ ಮೊದಲ್ಗೊಂಡು ವೇಷಭೂಷಣ, ಸಂಗೀತ, ಪಠ್ಯಕ್ರಮ, ನರ್ತನ ಆಶಯಗಳ ಉದ್ದಗಲಕ್ಕೂ ಸಾಕಷ್ಟು ಮಾರ್ಪಾಡುಗಳು ಶಾಸ್ತ್ರೀಯ ನೃತ್ಯಗಳಲ್ಲಿ ಆಗುತ್ತಾ ಬಂದಿವೆ. ಇತರ ಮಾಧ್ಯಮಗಳ ಪ್ರಭಾವವೂ ಸಾಕಷ್ಟು ಆಗಿದೆ. ಇತ್ತೀಚಿನ ದಶಕಗಳಲ್ಲಿ ಈ ನೃತ್ಯ ಸಂಸ್ಕೃತಿಯ ಮೂಲ ಅಂಶಗಳನ್ನು ಉಳಿಸಿಕೊಂಡಂತೆ ಸಾಕಷ್ಟು ಫ್ಯೂಶನ್ಗಳು ಹರಡಿದ್ದು, ಸಮಕಾಲೀನ ಸಮಾಜಕ್ಕೆ ಪೂರಕವಾಗಿ ನಡೆದುಕೊಳ್ಳಬಲ್ಲ ಎಲ್ಲಾ ಅಂಶಗಳನ್ನು ತೋರಿಸಿಕೊಟ್ಟಿದೆ. ಅಂದು ನೃತ್ಯವೆಂಬುದು ಕಳಂಕ ; ಅದೇ ಇಂದು ಪ್ರತಿಷ್ಠೆಯ ವಿಷಯ. ನೃತ್ಯ ಕ್ಷೇತ್ರದ ವ್ಯಾಪಾರೀಕರಣ ಬಡವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವೆಚ್ಚದಾಯಕವೆಂಬ ಕಾರಣಕ್ಕೆ ನೃತ್ಯಕ್ಕೆಂದು ಹುಳಿದ್ರಾಕ್ಷಿಯೇ ಹೌದು ! ಅನಾರೋಗ್ಯಕರ ಸ್ಪರ್ಧೆಯಿಂದಾಗಿ ವಿದ್ಯೆಯೆಂಬುದು ಕೇವಲ ಗಿಳಿಪಾಠವೇ ಸರಿ ! ಮಾತ್ರವಲ್ಲ, ನೃತ್ಯ ಪರೀಕ್ಷೆಗಳ ಸಾಕಷ್ಟು ಲೋಪಗಳು ಅಕಾಡೆಮಿಕ್ ಮಾನ್ಯತೆಗೊಂದು ಕಪ್ಪುಚುಕ್ಕಿ. ಹಾಗಾಗಿ ಬರಬರುತ್ತಾ ಎಲ್ಲಾರೀತಿಯಿಂದಲೂ ಯೋಗ್ಯತೆ ಪಡೆದಿರುವ ನಾಟ್ಯಾಚಾರ್ಯರು ವಿರಳವಾಗುತ್ತಿದ್ದಾರೆ. ವಿವಿಧ ಸಂಪ್ರದಾಯಗಳ ಒಳಜಗಳಗಳು, ಪ್ರದರ್ಶನ-ರಂಗಪ್ರವೇಶಗಳೇ ಅರ್ಹತೆಯ ಮಾನದಂಡಗಳೆಂಬ ಕಪೋಲ ಕಲ್ಪಿತ ನಂಬಿಕೆಗಳು ರಸಾನುಭೂತಿಯನ್ನೇ ಮರೆಸಿ ನಿರ್ವಾತ ವಾತಾವರಣವನ್ನು ಸೃಷ್ಠಿಸುತ್ತಿವೆ.
ಇಷ್ಟೆಲ್ಲಾ ನೃತ್ಯಕ್ಷೇತ್ರದ ಹಲವು ವಿರೋಧಾಭಾಸಗಳ ಮಧ್ಯೆ ಪರಂಪರೆಯ ಜೊತೆಗೆ ವಿನೂತನ ನಡೆಯನ್ನು ಮುಕ್ತವಾಗಿ ಒಪ್ಪಿ, ತಿದ್ದಿ ನಡೆಯುವ ವಿಶಾಲ ಮತ್ತು ಪ್ರತಿಭಾಶೀಲ ಮನಸ್ಸುಗಳ ಅಗತ್ಯವಿದೆ. ಒಂದಷ್ಟು ಚಲನಶೀಲತೆ, ಗುಣಮಟ್ಟದ ಬದಲಾವಣೆಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿ ಇರುವವರೆಗೆ ಕಲೆಯ ಕಡೆಗೆ ನೋಡುವ ಪ್ರತೀ ದೃಷ್ಠಿಯೂ ಹೊಸತೆನಿಸುತ್ತದೆ. ಭಾರತದ ನೃತ್ಯಪರಂಪರೆ ಇಲ್ಲಿನ ಆತ್ಮಚರಿತ್ರೆ. ಆತ್ಮದ ಉನ್ನತಿಯೇ ಕಲೆಯ ಪರಮೋದ್ದೇಶ. ಅಂತಹ ಸಧಭಿರುಚಿಯ ಪ್ರಯತ್ನಗಳು ನಮ್ಮಿಂದ ಹರಿದುಬರಲಿ.
(ಅಸೀಮಾ ಮಾರ್ಚ್ ೨೦೦೯ ಪತ್ರಿಕೆಯಲ್ಲಿ ಪ್ರಕಟವಾದ ಮುಖಪುಟ ವಿಷಯ ಲೇಖನ )